

ಮುಂಬಯಿ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾವ್ಡಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ 19 ವರ್ಷದ ಮಗನನ್ನು ರಕ್ಷಿಸಲು ಹೋಗಿ ಹೆತ್ತ ಪೋಷಕರೂ ಪ್ರಾಣ ಕಳೆದುಕೊಂಡಿರುವ ಘಟನೆಗೆ ಟ್ವಿಸ್ಟ್ ಸಿಕ್ಕಿದೆ.
ಈ ಘಟನೆ ಬರೀ ಐಫೋನ್ ಇಎಂಐಗೆ ಸಂಬಂಧ ನಡೆದಿಲ್ಲವೆಂದು ಮೃತರ ಸಂಬಂಧಿ ತಿಳಿಸಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ. ದುರಂತವು ಐಫೋನ್ ಇಎಂಐಗಾಗಿ ಆಗಿಲ್ಲ. ಆಗಾಗ್ಗೆ ಮನೆಯಲ್ಲಿ ಪೋಷಕರ ಮಧ್ಯೆ ನಡೆಯುತ್ತಿದ್ದ ಜಗಳದಿಂದ ಸಂಭವಿಸಿದೆ ಎಂದು ಮೃತರ ಸಂಬಂಧಿ ತಿಳಿಸಿದ್ದಾರೆ.
ಮೃತನ ಅಣ್ಣನ ಸಾವಿನ ಬಳಿಕ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಎಂದು ಮೂಲಗಳ ತಿಳಿಸಿರುವುದಾಗಿ ವರದಿಯಾಗಿದೆ. ಕುನಾಲ್ ಕಳೆದ ವರ್ಷ ಇದೇ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಮಯದಲ್ಲಿ ಆತನ ಮನವೊಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಅವರು ವಿಫಲರಾದರು.
ತಂದೆ ಮುರಳೀಧರ್ 250 ಅಡಿ ಆಳದ ಕಮರಿಗೆ ಬಿದ್ದರು, ಮತ್ತು ಮಗನ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ತಾಯಿ ಸಂಗೀತಾ ಕೂಡ ಅದೇ ಕಮರಿಗೆ ಹಾರಿದರು. ಇಬ್ಬರೂ ತಮ್ಮ ಎರಡನೇ ಮಗನೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದರು. ಮೂಲಗಳ ಪ್ರಕಾರ, ಆರು ವರ್ಷಗಳ ಹಿಂದೆ ದಂಪತಿಯ ಹಿರಿಯ ಮಗ ಅನಾರೋಗ್ಯದಿಂದ ಮೃತಪಟ್ಟ ನಂತರ ಈ ಕೌಟುಂಬಿಕ ಕಲಹ ಪ್ರಾರಂಭವಾಗಿತ್ತು.
ಚಾಲಕನಾಗಿ ಕೆಲಸ ಮಾಡುತ್ತಿದ್ದ ತಂದೆ, ಕೆಲಸದಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದರು. ಅವರು ಸತತವಾಗಿ ಹಲವು ತಿಂಗಳುಗಳ ಕಾಲ ಮನೆಗೆ ಬರುತ್ತಿರಲಿಲ್ಲ ಎಂದು ವರದಿಯಾಗಿದೆ.
ಆತ್ಮಹತ್ಯೆಗೂ ಎರಡು ದಿನಗಳ ಮೊದಲು ಅವರು ಮನೆಗೆ ಮರಳಿದ್ದರು, ಇದು ಮನೆಯಲ್ಲಿ ಜಗಳಕ್ಕೆ ಕಾರಣವಾಗಿತ್ತು. ಕುನಾಲ್ ಐಫೋನ್ ಖರೀದಿಸಿದ್ದ, ಆದರೆ ಅದರ ಕಂತುಗಳನ್ನು (ಇಎಂಐ) ಪಾವತಿಸಲು ಆತನಿಗೆ ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರವಾಗಿ ಆತ ಮತ್ತು ಆತನ ತಂದೆಯ ನಡುವೆ ವಾಗ್ವಾದ ನಡೆದಿತ್ತು, ಆ ನಂತರ ಬೆಳಗ್ಗೆ 10 ಗಂಟೆ ಸುಮಾರಿಗೆ ಆತ ಬೆಟ್ಟದ ಕಡೆಗೆ ಹೋಗಿದ್ದ ಎನ್ನಲಾಗಿದೆ. ಆದರೆ ಕುನಾಲ್ ಮತ್ತು ಆತನ ತಾಯಿ ಇಬ್ಬರ ಬಳಿಯೂ ಐ ಫೋನ್ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಕುನಾಲ್ ತಾಯಿ ಸಂಗೀತಾ ಯೂಟ್ಯೂಬ್ನಲ್ಲಿ 30,000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ಅವರು, ತಮ್ಮ ಚಾನೆಲ್ನಲ್ಲಿ ಹಲವು ಪ್ರೇರಣಾದಾಯಕ ವಿಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಜತೆಗೆ, ತಮ್ಮ ಮಗನೊಂದಿಗಿನ ಚಿಕ್ಕ ಚಿಕ್ಕ ವ್ಲಾಗ್ಗಳನ್ನೂ ಹಂಚಿಕೊಂಡಿದ್ದರು.
ದುರಂತ ಸಂಭವಿಸುವುದಕ್ಕೂ ಒಂದು ದಿನ ಮೊದಲು (ಗುರುವಾರ) ಸಂಗೀತಾ ಅವರು ಸಂಬಂಧಗಳು ಮತ್ತು ಅವುಗಳ ಮೌಲ್ಯಗಳ ಕುರಿತು ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ್ದರು.
ಪ್ರೀತಿಯನ್ನು ಗೌರವಿಸದ ವ್ಯಕ್ತಿಗಾಗಿ ಏನನ್ನೂ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದರು. ನಿಮ್ಮ ಪ್ರೀತಿಯನ್ನು ಗೌರವಿಸುವ ವ್ಯಕ್ತಿಗೆ ನಿಮ್ಮ ಜೀವನವನ್ನೇ ನೀಡಲು ಸಿದ್ಧರಾಗಿ. ಆದರೆ, ಆ ವ್ಯಕ್ತಿಯು ನಿಮ್ಮನ್ನು, ನಿಮ್ಮ ಪ್ರೀತಿಯನ್ನು ಗೌರವಿಸದಿದ್ದರೆ, ನೀವು ಅವರಿಗಾಗಿ ಏನು ಮಾಡಿದರೂ ಅರ್ಥವಿರುವುದಿಲ್ಲ ಎಂದು ಸಂಗೀತಾ ಹೇಳಿಕೊಂಡಿದ್ದರು.
ಸಂಗೀತಾ ಅವರು ಮರಾಠಿಯಲ್ಲಿ ಮಾತನಾಡಿರುವ 1 ನಿಮಿಷದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆರು ವರ್ಷಗಳ ಹಿಂದೆ ಅನಾರೋಗ್ಯದಿಂದ ಹಿರಿಯ ಮಗ ತೀರಿಕೊಂಡ ಬಳಿಕ ಸಂಗೀತಾ ಅವರು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಚಪಾತಿ ಎರಡೂ ಕಡೆಯಿಂದ ಸುಟ್ಟಾಗ ಮಾತ್ರ ರುಚಿಯಾಗಿರುತ್ತದೆ ಎಂದಿದ್ದ ಸಂಗೀತಾ, ಸಂಬಂಧಗಳ ವಿಷಯದಲ್ಲೂ ಅಷ್ಟೇ... ಎರಡೂ ಕಡೆಯಿಂದ ಗೌರವ, ಪ್ರೀತಿ ಸಿಗುತ್ತಿದ್ದರೆ ಮಾತ್ರ ಅಂತಹ ಸಂಬಂಧ ಚೆನ್ನಾಗಿರುತ್ತದೆ. ಒಬ್ಬರು ಮಾತ್ರ ಬೆಲೆ ಕೊಟ್ಟ ಇನ್ನೊಬ್ಬರು ಬೆಲೆ ಕೊಡದಿದ್ದರೆ ಅಂತಹ ಸಂಬಂಧಕ್ಕೆ ಯಾವುದೇ ಅರ್ಥವಿರುವುದಿಲ್ಲ. ಅಂತಹ ಸಂಬಂಧದಿಂದ ಹೊರಬರುವುದೇ ಒಳಿತು’ ಎಂದು ಅವರು ಹೇಳಿದ್ದರು.