

ಛತ್ತೀಸ್ಗಢ: ಬುಧದೇವ ಮತ್ತು ಮಹಾದೇವನಿಗೆ ಪ್ರಾರ್ಥನೆ ಸಲ್ಲಿಸಿ ಹಾಗೂ ನಿಂಬೆಹಣ್ಣನ್ನು ಕತ್ತರಿಸುವ ಮೂಲಕ ಬಲೋದ್ ಜಿಲ್ಲೆಯಲ್ಲಿ ಭಾರಿ ಮಳೆಯನ್ನು ನಿಲ್ಲಿಸಿದೆ ಎಂಬ ಹೇಳಿಕೆ ಮೂಲಕ ಬಿಜೆಪಿ ಸಂಸದ ಭೋಜ್ರಾಜ್ ನಾಗ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕಂಕೇರ್ ಕ್ಷೇತ್ರದ ಸಂಸದರಾದ ನಾಗ್, ಮಂಗಳವಾರ ದೌಂಡಿಲೋಹಾರದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಈ ಹೇಳಿಕೆ ನೀಡಿದ್ದರು.'ಮಹತಾರಿ ವಂದನ್ ಯೋಜನೆ'ಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅಲ್ಲಿಗೆ ಆಗಮಿಸಿದ್ದರು.
ಸಂಸದರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಮತ್ತು ಮೂಢನಂಬಿಕೆ ವಿರೋಧಿ ಹೋರಾಟಗಾರರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಹವಾಮಾನ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ನಾಗ್, ನಿಂಬೆಹಣ್ಣು ಕತ್ತರಿಸಿ ಮಳೆ ನಿಲ್ಲಿಸಿದೆ ಎಂದು ಹೇಳಿದ್ದಾರೆ.
ಭಾರಿ ಮಳೆಯಾಗುತ್ತಿತ್ತು. ಮುಖ್ಯಮಂತ್ರಿಗಳ ಭೇಟಿಯ ಬಗ್ಗೆ ತಮಗೆ ಮಾಹಿತಿ ಬಂದಿತ್ತು ಎಂದು ಹೇಳಿದರು. ಮಧ್ಯರಾತ್ರಿಯ ಸುಮಾರಿಗೆ ಮುಖ್ಯಮಂತ್ರಿಗಳ ಭೇಟಿಗೆ ಸಂಬಂಧಿಸಿದ ಶಿಷ್ಟಾಚಾರದ (ಪ್ರೊಟೊಕಾಲ್) ಮಾಹಿತಿ ತಲುಪಿತ್ತು ಮತ್ತು ಹಿಂದಿನ ದಿನವೂ ಹವಾಮಾನ ಹದಗೆಟ್ಟಿತ್ತು. ನಂತರ, ನಿಂಬೆಹಣ್ಣನ್ನು ಕತ್ತರಿಸುವ ಮುನ್ನ ಬುಧದೇವ ಮತ್ತು ಮಹಾದೇವನಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಳೆ ನಿಂತಿತು ಮತ್ತು ಕಾರ್ಯಕ್ರಮ ಸುಗಮವಾಗಿ ನಡೆಯಲು ಸಾಧ್ಯವಾಯಿತು ಎಂದು ಅವರು ವಿವರಿಸಿದ್ದಾರೆ.
"ಹವಾಮಾನ ಕೆಟ್ಟದಾಗಿತ್ತು, ಭಾರಿ ಮಳೆಯಾಗುತ್ತಿತ್ತು ಮತ್ತು ಸಿಎಂ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿತ್ತು. ಆದರೆ ನಾನು ಮಹಾದೇವನಿಗೆ ಪ್ರಾರ್ಥನೆ ಸಲ್ಲಿಸಿ, ನಿಂಬೆಹಣ್ಣನ್ನು ಕತ್ತರಿಸಿ, ಮಳೆ ನಿಲ್ಲಿಸಿದೆ. ಈಗ ಕಾರ್ಯಕ್ರಮ ಯಶಸ್ವಿಯಾಗಿದೆ. ಮಳೆ ಬರುವುದಿದ್ದರೆ ಬರಲಿ ಎಂದು ನಾಗ್ ಹೇಳುವ ಮೂಲಕ ವೇದಿಕೆಯಲ್ಲಿದ್ದವರು ನಗೆ ಗಡಲಲ್ಲಿ ತೇಲುವಂತೆ ಮಾಡಿದರು.
ಈ ಮಧ್ಯೆ ಬಿಜೆಪಿ ಸಂಸದರು ಮೂಢನಂಬಿಕೆ ಮತ್ತು ತಪ್ಪು ಮಾಹಿತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಛತ್ತೀಸ್ಗಢ ಕಾಂಗ್ರೆಸ್ ಮುಖ್ಯಸ್ಥ ದೀಪಕ್ ಬೈಜ್ ಆರೋಪಿಸಿದ್ದು, ನಾಗ್ ಅವರ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ. ನಿಂಬೆಹಣ್ಣು ಕತ್ತರಿಸುವುದರಿಂದ ಮಳೆಯನ್ನು ನಿಲ್ಲಿಸಲು ಸಾಧ್ಯವಾದರೆ, ಸಕ್ಕರೆ ಬೆಲೆ ಮತ್ತು ಹಣದುಬ್ಬರವನ್ನು ಕಡಿಮೆ ಮಾಡಲು ಕೂಡ ಅವರು ಹಾಗೆಯೇ ಮಾಡಲಿ ಎಂದು ಬೈಜ್ ಹೇಳಿದರು. ನಿಂಬೆಹಣ್ಣು, ಮಂತ್ರ-ತಂತ್ರ ಹಾಗೂ ಅಡೆತಡೆಗಳು ಅಥವಾ ದುರಾದೃಷ್ಟವನ್ನು ನಿವಾರಿಸುವ ಆಚರಣೆಗಳಿಗೆ ಸಂಬಂಧಿಸಿದ ಹೇಳಿಕೆಗಳ ಮೂಲಕ 'ನಾಗ್' ಈ ಹಿಂದೆಯೂ ಗಮನ ಸೆಳೆದಿದ್ದರು.
ಸಾರ್ವಜನಿಕರ ದೂರುಗಳನ್ನು ಬಗೆಹರಿಸಲು ವಿಫಲರಾದ ಅಧಿಕಾರಿಗಳಿಗಾಗಿ "ನಿಂಬೆಹಣ್ಣು ಕತ್ತರಿಸುವುದಾಗಿ" (ಅಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಥವಾ ಅವರಿಗೆ ಪಾಠ ಕಲಿಸುವುದಾಗಿ) ಅವರು ಈ ಹಿಂದೆ ಬೆದರಿಕೆ ಹಾಕಿದ್ದರು.
ಅವರ ಇತ್ತೀಚಿನ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವ್ಯಂಗ್ಯಕ್ಕೆ ಗುರಿಯಾಗಿದೆ; ವಿದ್ಯುತ್ ಬಿಲ್, ಇಂಧನ ದರ ಮತ್ತು ಮನೆಯ ಖರ್ಚುಗಳನ್ನು ಕಡಿಮೆ ಮಾಡಲು ಇದೇ ವಿಧಾನವನ್ನು ಬಳಸಬಹುದೇ ಎಂದು ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ.