

ನವದೆಹಲಿ: ಭಾರತದ ಆರ್ಥಿಕತೆ ಸ್ಥಿರವಾಗಿರುವುದರ ಜೊತೆಗೆ ವೇಗವಾಗಿ ಬೆಳೆಯುವಂತೆ ಮಾಡಲು ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬೆಂಬಲ ನೀಡುವ ಜೊತೆಗೆ, ಹಣಕಾಸು ಕೊರತೆಯನ್ನು ನಿಯಂತ್ರಣದಲ್ಲಿ ಇಡುವುದಕ್ಕೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದು, ಇಂದು ಮಂಡನೆ ಮಾಡಿರುವ ಬಜೆಟ್'ನ 6 ಅಂಶಗಳನ್ನು ಹೆಸರಿಸಿದ್ದಾರೆ.
2026-27ರ ಬಜೆಟ್ನಲ್ಲಿ ಉತ್ಪಾದನಾ ವಲಯಕ್ಕೆ ಉತ್ತೇಜನ, ಮೂಲಸೌಕರ್ಯ ಅಭಿವೃದ್ಧಿ, ಎಂಎಸ್ಎಂಇ ಸಬಲೀಕರಣ, ನಗರಾಭಿವೃದ್ಧಿ, ಭದ್ರತೆ ಮತ್ತು ರಕ್ಷಣಾ ವಲಯ, ಮಾನವ ಸಂಪನ್ಮೂಲದ ಮೇಲೆ ಕೇಂದ್ರೀಕರಿಸಿದ 6 ಪ್ರಮುಖ ಅಭಿವೃದ್ಧಿ ಕ್ರಮಗಳನ್ನು ವಿವರಿಸಿದರು.
ಉತ್ಪಾದನಾ ವಲಯಕ್ಕೆ ಉತ್ತೇಜನ:
‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ದೇಶೀಯ ಉತ್ಪಾದನಾ ವಲಯವನ್ನು ಬಲಪಡಿಸುವುದಕ್ಕೆ ಬಜೆಟ್ ವಿಶೇಷ ಒತ್ತು ನೀಡಿದೆ. ಕೈಗಾರಿಕಾ ಆಧಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಎಂಎಸ್ಎಂಇ (MSME)ಗಳಿಗೆ ಹೆಚ್ಚಿನ ಬೆಂಬಲ ಘೋಷಿಸಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ:
ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಅಥವಾ ಬಂಡವಾಳ ವೆಚ್ಚ (Capex) ನೀತಿಗೆ ಬಜೆಟ್ ಒತ್ತು ನೀಡಿದ್ದು, 2027ರ ಹಣಕಾಸು ವರ್ಷದಲ್ಲಿ ರೂ.12ಲಕ್ಷ ಕೋಟಿ ಮೀರುವ ಗುರಿಯನ್ನು ಹೊಂದಿದೆ. ದೀರ್ಘಕಾಲಿಕ ಆಸ್ತಿಗಳ ನಿರ್ಮಾಣ, ರೈಲು ಸುರಕ್ಷತೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ನಿರೀಕ್ಷಿಸಲಾಗಿದೆ.
ಎಂಎಸ್ಎಂಇ ಸಬಲೀಕರಣ
ಉದ್ಯೋಗ ಸೃಷ್ಟಿಗೆ ಪ್ರಮುಖವಾದ ಎಂಎಸ್ಎಂಇ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಸಾಲ ಸೌಲಭ್ಯ, ತಂತ್ರಜ್ಞಾನ ಅಳವಡಿಕೆ ಹಾಗೂ ಮಾರುಕಟ್ಟೆ ಸಂಪರ್ಕ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಗರಾಭಿವೃದ್ಧಿ
ನಗರ ಆರ್ಥಿಕ ಪ್ರದೇಶಗಳನ್ನು ಹೊಸ ಬೆಳವಣಿಗೆಯ ಎಂಜಿನ್ಗಳಾಗಿ ರೂಪಿಸುವ ಪ್ರಸ್ತಾವನೆ ಬಜೆಟ್ನಲ್ಲಿ ಸೇರಿದೆ. ನಗರ ಯೋಜನೆ ಮತ್ತು ಮೂಲಸೌಕರ್ಯ ಸುಧಾರಣೆಗೆ ಕ್ರಮಗಳನ್ನು ನಿರೀಕ್ಷಿಸಲಾಗಿದೆ.
ಭದ್ರತೆ ಮತ್ತು ರಕ್ಷಣಾ ವಲಯ
ದೇಶದ ದೀರ್ಘಕಾಲಿಕ ಭದ್ರತೆಗಾಗಿ ರಕ್ಷಣಾ ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲಾಗಿದ್ದು, ರಕ್ಷಣಾ ಬಂಡವಾಳ ವೆಚ್ಚಕ್ಕೆ (Defence Capital Acquisition) ಮಹತ್ವದ ಅನುದಾನ ಮೀಸಲಿಡಲಾಗಿದೆ.
ಮಾನವ ಸಂಪನ್ಮೂಲ ಮತ್ತು ಕಲ್ಯಾಣ
ಬಡವರು, ಯುವಕರು, ಅನ್ನದಾತರು ಮತ್ತು ಮಹಿಳೆಯರು (ಗರಿಬ್, ಯುವ, ಅನ್ನದಾತ, ನಾರಿ) ಎಂಬ ನಾಲ್ಕು ವರ್ಗಗಳ ಸಬಲೀಕರಣಕ್ಕೆ ಈ ಬಜೆಟ್ ವಿಶೇಷ ಗಮನ ಹರಿಸಿದೆ ಎಂದು ವಿವರಿಸಿದರು.
Advertisement