

ತಿರುವನಂತಪುರಂ: ಐಟಿ ಇಲಾಖೆ ದಾಳಿ ವೇಳೆ ನಡೆದಿರುವ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ‘ಅಸ್ವಾಭಾವಿಕ ಸಾವು’ ದೇಶದ ತೆರಿಗೆ ಆಡಳಿತಕ್ಕೆ ಕಳಂಕ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಣ್ಣಿಸಿದ್ದಾರೆ. ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಘಟನೆಯು ಗಂಭೀರ ಶ್ರದ್ಧೆಯ ಕೊರತೆಯನ್ನು ತೋರಿಸಿದೆ. ಐಟಿ ಶೋಧ ಕಾರ್ಯಾಚರಣೆ ವೇಳೆ ಮನೆಯಲ್ಲಿದ್ದ ವ್ಯಕ್ತಿಯು ಲೋಡ್ ಮಾಡಿದ ಬಂದೂಕು ತೆಗೆದುಕೊಂಡು ತನ್ನನ್ನು ತಾನೇ ಶೂಟ್ ಮಾಡಿಕೊಳ್ಳಬಹುದು ಎಂಬುದು ಆತಂಕಕಾರಿಯಾಗಿದೆ ಎಂದು ಭಾನುವಾರ ಬರೆದಿರುವ ಪತ್ರದಲ್ಲಿ ಕೇರಳ ಮುಖ್ಯಮಂತ್ರಿ ಹೇಳಿದ್ದಾರೆ.
ರಾಯ್ ಅವರನ್ನು ಶೋಧದ ಸ್ಥಳದಲ್ಲಿ ಇರಿಸುವ ಬದಲು ಮತ್ತೊಂದು ಕೊಠಡಿಗೆ ಸ್ಥಳಾಂತರಿಸಲಾಗಿದೆ ಎನ್ನುವ ಇತ್ತೀಚಿನ ವರದಿಗಳನ್ನು ವಿಜಯನ್ ಉಲ್ಲೇಖಿಸಿದ್ದು, ಇದು ಗಂಭೀರವಾದ ಲೋಪ ಮತ್ತು ಅಗತ್ಯ ಶಿಷ್ಟಾಚಾರ ಅನುಸರಿಸದಿರುವುದಕ್ಕೆ ಸಾಕ್ಷಿ ಎಂದಿದ್ದಾರೆ.
ಕಾನೂನು ನಿಬಂಧನೆಗಳನ್ನು ಅನುಸರಿಸಲಾಗಿದೆ ಎಂದು ಹೇಳುವ ಅಧಿಕೃತ ಸ್ಪಷ್ಟೀಕರಣವು ಸಾಕಾಗುವುದಿಲ್ಲ. ಪ್ರಕರಣದ ವ್ಯಾಪಕ ಅಂಶಗಳನ್ನು ಪರಿಶೀಲಿಸಲು ನ್ಯಾಯಾಂಗ ತನಿಖೆ ಅಗತ್ಯ ಎಂದು ವಾದಿಸಿದ್ದಾರೆ.
ಕೇಂದ್ರ ಸರ್ಕಾರ ವಿಳಂಬ ಮಾಡದೆ ಇಂತಹ ತನಿಖೆಗೆ ಆದೇಶಿಸಬೇಕು ಮತ್ತು ನಿಗದಿತ ಕಾಲಮಿತಿಯೊಳಗೆ ಸಮಗ್ರ ವರದಿಯನ್ನು ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ದುರಂತ ಘಟನೆಗಳು ನಡೆಯದಂತೆ ನಿಷ್ಪಕ್ಷಪಾತ ತನಿಖೆ ಅತ್ಯಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.
ಸುರಕ್ಷಿತ ಮತ್ತು ಮಾನವೀಯ ರೀತಿಯಲ್ಲಿ ಶೋಧಗಳನ್ನು ನಡೆಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಸಿಜೆ ರಾಯ್ ಅವರಂತೆ ಅಮೂಲ್ಯವಾದ ಮಾನವ ಜೀವವನ್ನು ಕಳೆದುಕೊಳ್ಳುವ ಯಾವುದೇ ಕ್ರಮವನ್ನು ನಾಗರಿಕ ಪ್ರಜಾಪ್ರಭುತ್ವ ಸಮಾಜದಲ್ಲಿ ಸಮರ್ಥಿಸಲಾಗುವುದಿಲ್ಲ ಎಂದು ವಿಜಯನ್ ಹೇಳಿದ್ದಾರೆ.
Advertisement