

ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿರೋಧ ಪಕ್ಷದ ಸಂಸದರು ಯೋಚಿಸಿರುವುದಾಗಿ ಮೂಲಗಳು ಸೋಮವಾರ ತಿಳಿಸಿವೆ.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಇದೀಗ ಈ ಬೆಳವಣಿಗೆಯಾಗಿದೆ.
ಕಳೆದ ವಾರ, ಚೀನಾದೊಂದಿಗಿನ 2020 ರ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರ 'ಅಪ್ರಕಟಿತ' ಆತ್ಮಚರಿತ್ರೆಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದಾಗ ಲೋಕಸಭೆಯಲ್ಲಿ ಗದ್ದಲ, ಕೋಲಾಹಲ ಉಂಟಾಗಿತ್ತು.
ಅಪ್ರಕಟಿತ ಆತ್ಮಚರಿತ್ರೆಯನ್ನು ಓದದಂತೆ ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಆದೇಶಿಸಿದ್ದರು. ಕೆಲವು ಕಾಂಗ್ರೆಸ್ ಸಂಸದರಿಂದ ಪ್ರಧಾನಿ ಬೆದರಿಕೆಯಂತಹ ಘಟನೆ ಬಗ್ಗೆ ಮಾಹಿತಿ ಬಂದಿರುವುದರಿಂದ ಸಂಭಾವ್ಯ ಯಾವುದೇ ಅಹಿತಕರ ಘಟನೆ ತಡೆಯಲು ಪ್ರಧಾನಿ ಸದನಕ್ಕೆ ಬರದಂತೆ ತಾವೇ ಹೇಳಿದ್ದಾಗಿ ಫೆಬ್ರವರಿ 5 ರಂದು ಸ್ಪೀಕರ್ ಹೇಳಿದ್ದರು.
ಇಂದು ಕಲಾಪ ಆರಂಭವಾಗುತ್ತಿದ್ದಂತೆಯೇ ಭಾರತ-ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಘೋಷಣೆ ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಸ್ಪೀಕರ್ ಬಿರ್ಲಾ ಅವರು ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.
ಕಲಾಪ ಆರಂಭವಾದ ಏಳು ನಿಮಿಷಗಳ ನಂತರ ಕಲಾಪವನ್ನು ಮುಂದೂಡಲಾಯಿತು. ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿ ಪ್ರತಿಭಟನೆ ಮುಂದುವರೆಸಿದರು. ಶಾಂತಿ ಕಾಪಾಡುವಂತೆ, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವಂತೆ ಸ್ಪೀಕರ್ ಅವರು ಪದೇ ಪದೇ ಮನವಿ ಮಾಡಿದ್ದರೂ ವಿಪಕ್ಷಗಳ ಸದಸ್ಯರು ಸೊಪ್ಪು ಹಾಕಲಿಲ್ಲ. ಹೀಗಾಗಿ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.
Advertisement