

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ವೇಗವಾಗಿ ಬಂದ ಐಷಾರಾಮಿ ಲ್ಯಾಂಬೋರ್ಘಿನಿ ಕಾರೊಂದು ಪಾದಚಾರಿಗಳ ಮೇಲೆ ಹರಿದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಕಾನ್ಪುರದ ಸ್ಥಳೀಯ ತಂಬಾಕು ಉದ್ಯಮಿ ಕೆಕೆ ಮಿಶ್ರ ಅವರ ಪುತ್ರ ಶಿವಂ ಮಿಶ್ರಾ ಅವರಿಗೆ ನಾಯಾಲಯ ಜಾಮೀನು ನೀಡಿದೆ.
10 ಕೋಟಿ ರೂಪಾಯಿ ಮೌಲ್ಯದ ಲಂಬೋರ್ಘಿನಿ ರೆವೆಲ್ಟೊ ಆಟೋರಿಕ್ಷಾ, ಮೋಟಾರ್ ಸೈಕಲ್ ಡಿಕ್ಕಿ ಹೊಡೆದು ನಂತರ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಗಾಯಗೊಂಡ ಘಟನೆಯ ನಾಲ್ಕು ದಿನಗಳ ನಂತರ ಮಿಶ್ರಾ ಅವರನ್ನು ಬಂಧಿಸಲಾಗಿತ್ತು. ಬಂಧಿಸಲ್ಪಟ್ಟ ಕೆಲವೇ ಗಂಟೆಗಳಲ್ಲಿ ಶಿವಂ ಮಿಶ್ರಾಗೆ ಜಾಮೀನು ಮಂಜೂರು ಮಾಡಲಾಗಿದೆ.
18 ವರ್ಷದ ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫೀಕ್ ಅವರ ದೂರಿನ ಆಧಾರದ ಮೇಲೆ ಉದ್ಯಮಿ ಪುತ್ರನನ್ನು ಬಂಧಿಸಲಾಗಿತ್ತು.
ಶಿವಂ ಮಿಶ್ರಾ ಚಲಾಯಿಸುತ್ತಿದ್ದರು ಎನ್ನಲಾದ ಲ್ಯಾಂಬೋರ್ಘಿನಿ ರೆವೆಲ್ಟೊ ಕಾರು ಕಳೆದ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ವಾಲ್ಟೋಲಿ ಪ್ರದೇಶದಲ್ಲಿ ಪಾದಚಾರಿಗಳು ಮತ್ತು ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ತೌಫೀಕ್ ಸೇರಿದಂತೆ ಕನಿಷ್ಠ ಆರು ಮಂದಿ ಗಾಯಗೊಂಡಿದ್ದರು.
ಬುಧವಾರ ಕಾರಿನ ನಿಯೋಜಿತ ಚಾಲಕ ಎಂದು ಹೇಳಿಕೊಳ್ಳುವ ಮೋಹನ್ ಎಂಬ ವ್ಯಕ್ತಿ, ಅಪಘಾತದ ಸಮಯದಲ್ಲಿ ಶಿವಂ ಮಿಶ್ರಾ ಕಾರು ಚಾಲನೆ ಮಾಡಿಲ್ಲ. ನಾನು ಕಾರು ಚಲಾಯಿಸುತ್ತಿದ್ದೆ ಎಂದು ಹೇಳಿಕೊಂಡಾಗ ಪ್ರಕರಣವು ಹೊಸ ತಿರುವು ಪಡೆದುಕೊಂಡಿತು.
ಆದಾಗ್ಯೂ, ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಪುರಾವೆಗಳು ಶಿವಂ ಮಿಶ್ರಾ ಅವರೇ ಕಾರು ಚಾಲನೆ ಮಾಡುತ್ತಿದ್ದರು ಮತ್ತು ಕಾರು ಪಾದಚಾರಿಗಳು ಹಾಗೂ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಪಷ್ಟವಾಗಿ ದೃಢಪಡಿಸಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.
Advertisement