

ಮುಂಬೈ: ಕೇಂದ್ರೀಯ ಸಂಸ್ಥೆಗಳ ಒತ್ತಡದಿಂದಾಗಿ NCP ತೊರೆದಿದ್ದ ಅಜಿತ್ ಪವಾರ್ ಮತ್ತೆ ಎರಡು ಬಣಗಳ ವಿಲೀನಕ್ಕೆ ಉತ್ಸುಕರಾಗಿದ್ದರು ಎಂದು ಪಕ್ಷದ ಮುಖವಾಣಿಯಲ್ಲಿನ ಲೇಖನವೊಂದರಲ್ಲಿ ಎನ್ಸಿಪಿ SP ರಾಜ್ಯಾಧ್ಯಕ್ಷ ಶಶಿಕಾಂತ್ ಶಿಂಧೆ ಹೇಳಿದ್ದಾರೆ.
ಎರಡೂ ಬಣಗಳ ವಿಲೀನದ ನಂತರ ಏಕೀಕೃತ ಪಕ್ಷದ ನಾಯಕತ್ವವನ್ನು ಅಜಿತ್ ಪವಾರ್ಗೆ ವಹಿಸಲು ನಿರ್ಧರಿಸಲಾಗಿತ್ತು. ಆದರೆ ಅದು ನಡೆಯುವ ಮುನ್ನಾವೇ ಅವರು ವಿಮಾನ ಅಪಘಾತ ದುರಂತದಲ್ಲಿ ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.
ಈ ಲೇಖನದ ಬಗ್ಗೆ ಪ್ರತಿಕ್ರಿಯಿಸಿದ ಅಜಿತ್ ಪವಾರ್ ಅವರ ಎನ್ಸಿಪಿಯ ರಾಜ್ಯಾಧ್ಯಕ್ಷ ಸುನಿಲ್ ತಟ್ಕರೆ, ಶಿಂಧೆ ಬಳಸಿದ 'ಅದೃಶ್ಯ ಶಕ್ತಿಗಳು' ಎಂಬ ಪದಗಳನ್ನು ಆಕ್ಷೇಪಿಸಿದ್ದಾರೆ.
ಬಿಜೆಪಿ ಮತ್ತು ಎನ್ಸಿಪಿ ರಾಜಕೀಯ ಸ್ಥಿರತೆ ಮತ್ತು ಉತ್ತಮ ಆಡಳಿತ ನೀಡಬಲ್ಲವು ಎಂದು ಅವರು ಭಾವಿಸಿದ್ದರಿಂದ ಅಜಿತ್ ದಾದಾ 2014 ರಿಂದಲೂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬಯಸಿದ್ದರು. ಅನೇಕ ಸಂದರ್ಭಗಳಲ್ಲಿ ಎನ್ಸಿಪಿ ನಾಯಕತ್ವಕ್ಕೆ ಇದನ್ನು ಸ್ಪಷ್ಟಪಡಿಸಿದ್ದರು. ಶಿಂಧೆ ಇದನ್ನೆಲ್ಲ ಏಕೆ ಬರೆದಿದ್ದಾರೆ ಮತ್ತು ಬರೆಯುವಲ್ಲಿ ಅವರ ಉದ್ದೇಶವೇನು ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ರಾಷ್ಟ್ರವಾದಿ ಮಾಸಪತ್ರಿಕೆಯಲ್ಲಿ ಲೇಖನ ಬರೆದಿರುವ ಶಶಿಕಾಂತ್ ಶಿಂಧೆ, 'ಅದೃಶ್ಯ ಶಕ್ತಿಗಳ' ಕುಶಲತೆ, ಬೆದರಿಕೆ ಮತ್ತು ಸುಳ್ಳು ಆರೋಪಗಳ ಜಾಲವು ಬಿಜೆಪಿಯೊಂದಿಗೆ ಕೈಜೋಡಿಸುವಂತೆ ಒತ್ತಾಯಿಸಿತು ಎಂದು ಆರೋಪಿಸಿದ್ದಾರೆ. 'ಹಿಂದಿನ ತಪ್ಪುಗಳನ್ನು ಸರಿಪಡಿಸುವ' ಪ್ರಕ್ರಿಯೆ ನಡೆಯುತಿತ್ತು. ಶರದ್ ಪವಾರ್ ಅವರ ಉತ್ತರಾಧಿಕಾರಿಯಾಗಿ ಅಜಿತ್ ಪವಾರ್ ಎರಡೂ ಬಣಗಳನ್ನು ಮುನ್ನಡೆಸಲು ಸಿದ್ಧರಾಗಿದ್ದರು.ಕಳೆದ ನಾಲ್ಕೈದು ತಿಂಗಳಿನಿಂದ ಎರಡೂ ಬಣಗಳನ್ನು ವಿಲೀನಗೊಳಿಸುವ ಕುರಿತು ಮಾತುಕತೆ ನಡೆಯುತಿತ್ತು ಎಂದು ಶಿಂಧೆ ಹೇಳಿದ್ದಾರೆ.
ಅಜಿತ್ ಪವಾರ್ ಕೂಡಾ ಶರದ್ ಪವಾರ್ ಅವರ ಸಂಪರ್ಕದಲ್ಲಿದ್ದರು. ಬಾರಮತಿ ಮತ್ತು ಮುಂಬೈಯಲ್ಲಿ ಸಭೆ ಕೂಡಾ ನಡೆದಿತ್ತು. ಎರಡು ಬಣಗಳ ವಿಲೀನ ಕುರಿತು ಜಯಂತ್ ಪಾಟೀಲ್ ಮತ್ತಿತರ ನಾಯಕರೊಂದಿಗೆ ಅಜಿತ್ ಪವಾರ್ ಮಾತುಕತೆ ನಡೆಸಿದ್ದರು. ಮುನ್ಸಿಪಾಲ್ ಕಾರ್ಪೋರೇಷನ್ ಚುನಾವಣೆ ಸಂದರ್ಭದಲ್ಲಿ ಒಟ್ಟಾಗಿ ಸ್ಪರ್ಧಿಸಲು ಅಜಿತ್ ಪವಾರ್ ನಿರ್ಧರಿಸಿದ್ದರು. ತದನಂತರ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇದನ್ನೇ ಮಾಡಿದ್ದರು. ಅಲ್ಲದೇ ಬಹುತೇಕ ಕ್ಷೇತ್ರಗಳಲ್ಲಿ ಗಡಿಯಾರ ಚಿಹ್ನೆಯಡಿ ಸ್ಪರ್ಧಿಸಲಾಗಿತ್ತು. ಇದರಿಂದ ಪುಣೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಎನ್ ಸಿ ಪಿ ಗೆಲುವಿಗೆ ಸಹಕಾರಿಯಾಯಿತು ಎಂದು ಅವರು ತಿಳಿಸಿದ್ದಾರೆ.
Advertisement