

ನೋಯ್ಡಾ: ಗ್ರೇಟರ್ ನೋಯ್ಡಾದ ಖಾಸಗಿ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಎಂಆರ್ ಐ ಮಾಡುವ ಸಮಯದಲ್ಲಿ ಆರು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದ್ದು, ಆತನ ಕುಟುಂಬವು ಸಾವಿಗೆ ಡಯಾಗ್ನೋಸ್ಟಿಕ್ ನಿರ್ಲಕ್ಷ್ಯ ಮತ್ತು ಅವಧಿ ಮೀರಿದ ಔಷಧಿ ಕಾರಣ ಎಂದು ಆರೋಪಿಸಿರುವುದಾಗಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಬಾಲಕನ ಸಾವಿನ ನಂತರ ಶುಕ್ರವಾರ ಡಯಾಗ್ನೋಸ್ಟಿಕ್ ಕೇಂದ್ರವನ್ನು ಸೀಲ್ ಮಾಡಲಾಗಿದೆ ಮತ್ತು ಘಟನೆಯ ತನಿಖೆಗಾಗಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಗೌತಮ್ ಬುದ್ಧ ನಗರ ಆರೋಗ್ಯ ಇಲಾಖೆಯ ಡಾ. ಚಂದನ್ ಸೋನಿ ಅವರು ಪಿಟಿಐಗೆ ತಿಳಿಸಿದ್ದಾರೆ.
"ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ವಿಚಾರಣೆ ಪೂರ್ಣಗೊಂಡ ನಂತರ ಕಾರಣ ನಿರ್ಧರಿಸಲಾಗುತ್ತದೆ" ಎಂದು ಸೋನಿ ಹೇಳಿದ್ದಾರೆ.
ಗುರುವಾರ ಡುಂಗರಪುರ ಗ್ರಾಮದ ನಿವಾಸಿ ತಮ್ಮ ಮಗುವನ್ನು ಎಂಆರ್ ಐ ಸ್ಕ್ಯಾನ್ಗಾಗಿ ಪೈ -3 ಪ್ರದೇಶದಲ್ಲಿರುವ ಡಯಾಗ್ನೋಸ್ಟಿಕ್ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು.
ಎಂಆರ್ ಐ ಪ್ರಕ್ರಿಯೆ ಆರಂಭಿಸುವ ಮೊದಲು ಬಾಲಕ ಆರೋಗ್ಯವಾಗಿಯೇ ಇದ್ದ ಕುಟುಂಬ ಸದಸ್ಯರು ಹೇಳಿದ್ದಾರೆ. ಆದರೆ ಕೇಂದ್ರದ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಬಾಲಕನ ತಂದೆ ವಿಕಿ ಅವರು ಈ ಸಂಬಂಧ ಡಯಾಗ್ನೋಸ್ಟಿಕ್ ಕೇಂದ್ರದ ವಿರುದ್ಧ ಬೀಟಾ -2 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
"ವೈದ್ಯಕೀಯ ವಿಚಾರಣೆಯ ವರದಿ ಬಂದ ನಂತರ ಎಫ್ಐಆರ್ ದಾಖಲಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.
Advertisement