

ಅಸ್ಸಾಂನ ದಿಬ್ರುಗಢ ಜಿಲ್ಲೆಯ ಮೋರನ್ ಬೈಪಾಸ್ನಲ್ಲಿ ವಿಶೇಷವಾಗಿ ನಿರ್ಮಿಸಲಾದ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಶನಿವಾರ ವಾಯು ಪ್ರದರ್ಶನ ನಡೆಯಿತು.
ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯ (Emergency Landing Facility - ELF) ವಾದ ಈ ಸ್ತಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿಮಾನ ಇಳಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸೌಲಭ್ಯವು ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 4.2 ಕಿಲೋಮೀಟರ್ ಉದ್ದದ ರನ್ ವೇ ಹೊಂದಿದೆ.
ತುರ್ತು ಪರಿಸ್ಥಿತಿಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಮತ್ತು ಸಾರಿಗೆ ವಿಮಾನಗಳು ಇಳಿಯಲು ಮತ್ತು ಹಾರಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಇದಕ್ಕೂ ಮೊದಲು, ಪ್ರಧಾನಮಂತ್ರಿಗಳು ಚಾಬುವಾ ವಾಯುನೆಲೆಗೆ ಆಗಮಿಸಿದರು. ಅಲ್ಲಿ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ ಪ್ರಸಾದ್ ಆಚಾರ್ಯ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ನಂತರ ಚಾಬುವಾದಿಂದ ಭಾರತೀಯ ವಾಯುಪಡೆಯ ಸಿ-130ಜೆ ವಿಮಾನದಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯಕ್ಕೆ ತೆರಳಿದರು.
ಭೂಸ್ಪರ್ಶದ ನಂತರ, ಪ್ರಧಾನಮಂತ್ರಿ ಸುಮಾರು 20 ನಿಮಿಷಗಳ ಕಾಲ ನಡೆದ ವಾಯು ಪ್ರದರ್ಶನವನ್ನು ವೀಕ್ಷಿಸಿದರು. ಇದರಲ್ಲಿ ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಭಾಗವಹಿಸಿ, ಸೌಲಭ್ಯಗಳ ಕಾರ್ಯಕ್ಷಮತೆಯನ್ನು ಪ್ರದರ್ಶಿಸಲಾಯಿತು.
ಇದಾದ ಬಳಿಕ ಪ್ರಧಾನಮಂತ್ರಿ ಗುವಾಹಟಿಗೆ ತೆರಳಿ, ಬ್ರಹ್ಮಪುತ್ರ ನದಿಯ ಮೇಲೆ 3,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕುಮಾರ್ ಭಾಸ್ಕರ್ ವರ್ಮಾ ಸೇತುವೆಯನ್ನು ಉದ್ಘಾಟಿಸಿದರು. 1.24 ಕಿಲೋಮೀಟರ್ ಉದ್ದದ ಈ ಸೇತುವೆ ಗುವಾಹಟಿ ಮತ್ತು ಉತ್ತರ ಗುವಾಹಟಿಯನ್ನು ಸಂಪರ್ಕಿಸಿ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ಪ್ರಾದೇಶಿಕ ಸಂಪರ್ಕವನ್ನು ಸುಧಾರಿಸುತ್ತದೆ. ಕಠಿಣ ನದಿ ಪರಿಸ್ಥಿತಿಗಳ ನಡುವೆಯೇ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮಗಳ ನಂತರ, ಅಸ್ಸಾಂ ಭೇಟಿಯ ಅಂಗವಾಗಿ ಪ್ರಧಾನಮಂತ್ರಿಗಳು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವೂ ನಿಗದಿಯಾಗಿದೆ.
Advertisement