

ಮುಂಬೈ: ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ 3 ದಿನಗಳಿಂದ ಮುಂಬೈ ನಲ್ಲಿರುವ ರಿಲಾಯನ್ಸ್ ಆಸ್ಪತ್ರೆಯಲ್ಲಿ ಉದ್ಧವ್ ಠಾಕ್ರೆ ಪುತ್ರನಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬುಧವಾರದಂದು ಉದ್ಧವ್ ಠಾಕ್ರೆ ಅವರ ಕಿರಿಯ ಪುತ್ರ ತೇಜಸ್ ಠಾಕ್ರೆ ಅವರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ ತೇಜಸ್ ಠಾಕ್ರೆ ಸ್ಥಿತಿ ಗಂಭೀರವಾಗಿದ್ದರೂ ಈಗ ಅವರ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬರುತ್ತಿದ್ದು, ಚಿಕಿತ್ಸೆ ಮುಂದುವರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜಕೀಯ ಮತ್ತು ಸಾಮಾಜಿಕ ವಲಯದ ಹಲವು ಮುಖಂಡರು ಕೂಡ ತೇಜಸ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
ಉದ್ಧವ್ ಠಾಕ್ರೆ ಕಿರಿಯ ಪುತ್ರ ತೇಜಸ್ ಠಾಕ್ರೆ ಅವರ ಕುಟುಂಬದ ಹಿನ್ನೆಲೆ ರಾಜಕೀಯಕ್ಕೆ ಸಂಬಂಧಿಸಿದ್ದಾದರೂ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ವನ್ಯಜೀವಿ ಅಧ್ಯಯನ ಮತ್ತು ಪ್ರಕೃತಿ ಸಂರಕ್ಷಣೆಯತ್ತ ಅವರು ಹೆಚ್ಚಿನ ಆಸಕ್ತಿ ಹೊಂದಿದ್ದು, ವನ್ಯಜೀವಿ ಸಂಶೋಧಕರಾಗಿ ಖ್ಯಾತಿ ಗಳಿಸಿದ್ದಾರೆ. 2016ರಲ್ಲಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೊಸ ಸಿಹಿನೀರಿನ ಏಡಿ ಪ್ರಭೇದಳನ್ನು ಪತ್ತೆಹಚ್ಚುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. 2019ರ ಸೆಪ್ಟೆಂಬರ್ನಲ್ಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹೊಸ ಹಾವು ಪ್ರಭೇದ ಪತ್ತೆಯಾಗಿತ್ತು. ಈ ಪ್ರಭೇದಕ್ಕೆ ಅವರ ಕೊಡುಗೆಯನ್ನು ಸ್ಮರಿಸಿ “ಬೋಯಿಗಾ ಠಾಕ್ರೆ” ಎಂದು ಹೆಸರು ಇಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ತೇಜಸ್ ಠಾಕ್ರೆ ರಾಜಕೀಯ ಚಟುವಟಿಕೆಗಳಲ್ಲಿಯೂ ಹೆಚ್ಚು ತೊಡಗಿಸಿಕೊಂಡಿದ್ದರು. ಶಿವಸೇನೆ ಶಾಖೆಗಳಿಗೆ ಭೇಟಿ ನೀಡುವುದು, ಕಾರ್ಯಕರ್ತರೊಂದಿಗೆ ಸಂವಾದ ನಡೆಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದರು.
Advertisement