

ಕಿಶ್ತ್ವಾರ್: ಅಚಲ ಧೈರ್ಯ ಪ್ರದರ್ಶಿಸಿರುವ ಆರ್ಮಿ ಡಾಗ್ 'ಟೈಸನ್' ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ನ ಛತ್ರೂ ಪ್ರದೇಶದಲ್ಲಿನ ಭಯೋತ್ಪಾದಕರ ಅಡಗುತಾಣಕ್ಕೆ ಸೈನಿಕರನ್ನು ಕರೆದೊಯ್ದು, ಮೂವರು ಜೈಶ್-ಎ-ಮೊಹಮ್ಮದ್ ಉಗ್ರರನ್ನು ಹೊಡೆದುರುಳಿಸಲು ಭದ್ರತಾ ಪಡೆಗಳಿಗೆ ಸಹಾಯ ಮಾಡಿದೆ.
ಭಾರತೀಯ ಸೇನೆಯ 2 ಪ್ಯಾರಾ (ವಿಶೇಷ ಪಡೆ)ಯಲ್ಲಿದ್ದ ಜರ್ಮನ್ ತಳಿಯ ಟೈಸಾನ್, ಛತ್ರೂದ ಒರಟಾದ ಭೂಪ್ರದೇಶದಲ್ಲಿದ್ದ ಅಡಗುಣತಾಣಕ್ಕೆ ತೆರಳಿದ್ದು, ಉಗ್ರರು ಗುಂಡು ಹಾರಿಸುವಂತೆ ಪ್ರೇರೇಪಿಸಿದೆ. ಕಾಲಿಗೆ ಗುಂಡು ತಗುಲಿದ್ದರೂ ತರಬೇತಿ ಪಡೆದ ಶ್ವಾನ, ಅಡಗುತಾಣವನ್ನು ನಿಖರವಾಗಿ ಪತ್ತೆಹಚ್ಚಿ, ಉಗ್ರರನ್ನು ಹೊಡೆದುರುಳಿಸಲು ಸೈನ್ಯಕ್ಕೆ ನೆರವಾಗಿದೆ.
ಉಗ್ರರನ್ನು ಹೊಡೆದುರುಳಿಸಿದವರಲ್ಲಿ ಜಮ್ಮು-ಕಾಶ್ಮೀರ ಪೊಲೀಸರು, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ವಿಶೇಷ ಪಡೆಗಳು ಸೇರಿವೆ.
ಕಳೆದ ಎರಡು ವರ್ಷಗಳಿಂದ ಈ ಪ್ರದೇಶದಲ್ಲಿ ಪರಾರಿಯಾಗಿದ್ದ ಮತ್ತು ಕನಿಷ್ಠ 20 ಬಾರಿ ಪ್ರಾಣಾಪಾಯದಿಂದ ಪಾರಾಗಿದ್ದ ಜೆಇಎಂ ಭಯೋತ್ಪಾದಕ ಸೈಫುಲ್ಲಾ ಸೇರಿದಂತೆ ಮೂವರು ಉಗ್ರರನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ. ಹತ್ಯೆಗೀಡಾದ ಭಯೋತ್ಪಾದಕರ ವಶದಿಂದ ಎರಡು ಎಕೆ-47 ರೈಫಲ್ಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರು ಭದ್ರತಾ ಪಡೆಗಳೊಂದಿಗೆ ಬಹಳ ದಿನದಿಂದ ಕಣ್ಣಾಮುಚ್ಚಾಲೆ ಆಟದಲ್ಲಿ ತೊಡಗಿದ್ದರು. ಆದರೆ ಟೈಸನ್ ಅವರ ಅಡಗುತಾಣವನ್ನು ನಿಖರವಾಗಿ ಪತ್ತೆ ಹಚ್ಚಿ, ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ನೆರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement