

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಮತ್ತಷ್ಟು ಜನಪ್ರಿಯ ಉಚಿತ ಕೊಡುಗೆಗಳನ್ನು ಘೋಷಿಸಿದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಪ್ರಮುಖ ಐದು ಭರವಸೆಗಳನ್ನು ನೀಡಿದ್ದಾರೆ. ಇದರಲ್ಲಿ ಡಿಎಂಕೆ ಸರ್ಕಾರ ವಿಧಿಸಿರುವ ಹಲವು ತೆರಿಗೆಗಳಿಂದ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಪ್ರತಿ ಕುಟುಂಬಕ್ಕೆ ಒಂದು ಬಾರಿ 10,000 ರೂ. ನಗದು ನೆರವು ಸೇರಿದೆ.
ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಈಗಾಗಲೇ ಎರಡು ಕಂತುಗಳಲ್ಲಿ 10 ಜನಪ್ರಿಯ ಭರವಸೆಗಳನ್ನು ಘೋಷಿಸಿದ್ದಾರೆ. ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ಸಹಾಯವನ್ನು 2,000 ರೂ.ಗಳಿಗೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು, ಎಐಎಡಿಎಂಕೆ ಪ್ರಧಾನ ಕಚೇರಿಯಲ್ಲಿ ಪಳನಿಸ್ವಾಮಿ ಮೂರನೇ ಕಂತಿನ ಚುನಾವಣಾ ಭರವಸೆಗಳನ್ನು ಘೋಷಿಸಿದರು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಆಡಳಿತವು ಕಳೆದ ಐದು ವರ್ಷಗಳಲ್ಲಿ ಹಲವು ತೆರಿಗೆಗಳನ್ನು ವಿಧಿಸಿದೆ. ಇದು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ ಮತ್ತು ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ತೆರಿಗೆಗಳಲ್ಲಿ ಆಸ್ತಿ ತೆರಿಗೆ, ಮನೆ ತೆರಿಗೆ, ವಿದ್ಯುತ್ ದರ ಮತ್ತು ಕುಡಿಯುವ ನೀರಿನ ತೆರಿಗೆ ಸೇರಿವೆ. ಇದು ಕುಟುಂಬಗಳ ಮೇಲೆ ದೈನಂದಿನ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿದೆ. "ಈ ಸಂಕಷ್ಟವನ್ನು ಕಡಿಮೆ ಮಾಡಲು, ನಾವು ಅಧಿಕಾರಕ್ಕೆ ಬಂದ ನಂತರ ಪ್ರತಿ ಕುಟುಂಬಕ್ಕೆ 10,000 ರೂ. ಸಹಾಯ ನೀಡುತ್ತೇವೆ" ಎಂದು ಅವರು ಹೇಳಿದರು.
ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡು ಉದ್ಯೋಗಕ್ಕಾಗಿ ಕಾಯುತ್ತಿರುವ ಪದವೀಧರರಿಗೆ ಮಾಸಿಕ 2,000 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಎಐಎಡಿಎಂಕೆ ನಾಯಕ ಹೇಳಿದ್ದಾರೆ.
ಹೈಯರ್ ಸೆಕೆಂಡರಿ (+2) ಹಂತದವರೆಗೆ ಓದಿರುವ ಮತ್ತು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿರುವವರಿಗೆ ತಿಂಗಳಿಗೆ 1,000 ರೂ.ಗಳನ್ನು ನೀಡಲಾಗುವುದು.
Advertisement