

ಭೋಪಾಲ್: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನ್ಯಾಯಕರ ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದವನ್ನು ರದ್ದುಪಡಿಸುವಂತೆ ಸವಾಲು ಹಾಕಿದರು. ಅಮೆರಿಕಾದ ಸುಪ್ರೀಂ ಕೋರ್ಟ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಆಡಳಿತವಿರುವ ಮಧ್ಯ ಪ್ರದೇಶ ರಾಜಧಾನಿ ಭೋಪಾಲ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ದೇಶವ್ಯಾಪಿ “ಕಿಸಾನ್ ಮಹಾಚೌಪಾಲ್” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಮೆರಿಕಾ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಹಲವಾರು ದೇಶಗಳು ಅಮೆರಿಕ ಜೊತೆ ಮಾಡಿಕೊಂಡ ವ್ಯಾಪಾರ ಒಪ್ಪಂದಗಳನ್ನು ಮರುಪರಿಶೀಲಿಸುತ್ತಿವೆ ಅಥವಾ ರದ್ದುಗೊಳಿಸುತ್ತಿವೆ.
ಪ್ರಧಾನಿ ಮೋದಿ ಅವರಿಗೆ ಧೈರ್ಯವಿದ್ದರೆ, ಅವರು ಸಹ ಅನ್ಯಾಯಕರ ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದವನ್ನು ರದ್ದುಪಡಿಸಲಿ. ಆದರೆ ಅವರು ಅದನ್ನು ಮಾಡುವುದಿಲ್ಲ. ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕಾದ ಒತ್ತಡದಲ್ಲಿ ಅವರು ಇದ್ದಾರೆ. ಎಪ್ಸ್ಟೀನ್ ಫೈಲ್ಸ್ ಮತ್ತು ಗೌತಮ್ ಅದಾನಿ ವಿರುದ್ಧದ ಅಪರಾಧ ಪ್ರಕರಣದ ಭಯ ಅವರ ತಲೆಯ ಮೇಲೆ ತೂಗುತ್ತಿದೆ ಎಂದು ಟೀಕಿಸಿದರು.
ನಾನು ಬೇಕಾದರೆ ಲಿಖಿತ ರೂಪದಲ್ಲಿ ಹೇಳುತ್ತೇನೆ — ಪ್ರಧಾನಿ ಮೋದಿ ಒತ್ತಡದಲ್ಲಿರದಿದ್ದರೆ, ಈ ಒಪ್ಪಂದಕ್ಕೆ ಸಹಿ ಮಾಡುತ್ತಿರಲಿಲ್ಲ. ರೈತರು, ವಸ್ತ್ರೋದ್ಯಮ ಮತ್ತು ಗಾರ್ಮೆಂಟ್ ಕ್ಷೇತ್ರಗಳ ಹಿತಾಸಕ್ತಿಯನ್ನು ಪ್ರಧಾನಿ ಮೋದಿ ಮಾರಿಬಿಟ್ಟಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ಉಳಿಸಿಕೊಳ್ಳಲು ಭಾರತದ ಡೇಟಾವನ್ನೇ ಅಮೆರಿಕಾಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿದರು.
ಈ ತಿಂಗಳ ಆರಂಭದಲ್ಲಿ ಲೋಕಸಭೆಯಲ್ಲಿ ನಡೆದ ಘಟನೆಗೆ ಉಲ್ಲೇಖಿಸಿ, ಪ್ರಧಾನಿ ಮೋದಿ ಸಂಸತ್ತಿನಿಂದ ತಕ್ಷಣ ಹೊರನಡೆದು ಟ್ರಂಪ್ ಅವರಿಗೆ ಕರೆ ಮಾಡಿ, ಅಮೆರಿಕಾ ಹೇಳುವ ಷರತ್ತುಗಳ ಮೇಲೆ ಒಪ್ಪಂದಕ್ಕೆ ಸಹಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ಕೂಡ ಆರೋಪಿಸಿದರು.
ನಾಲ್ಕು ತಿಂಗಳು ಬಾಕಿ ಉಳಿದಿದ್ದ ಒಪ್ಪಂದಕ್ಕೆ ತ್ವರಿತವಾಗಿ ಸಹಿ ಹಾಕಲು ಕಾರಣವೇನು ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಎಪ್ಸ್ಟೀನ್ ಫೈಲ್ಸ್ ಭಯ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧದ ಅಮೆರಿಕಾದ ಪ್ರಕರಣ, ಈ ಎರಡೂ ಕಾರಣಗಳಿಂದ ಡೊನಾಲ್ಡ್ ಟ್ರಂಪ್ ಅವರ ಇಚ್ಛೆಯಂತೆ ಒಪ್ಪಂದವನ್ನು ತುರ್ತುಗತಿಯಲ್ಲಿ ಮಾಡಲಾಗಿದೆ ಎಂದು ಹೇಳಿದರು.
ಈ ಒಪ್ಪಂದವು ಪ್ರತಿಯೊಬ್ಬ ಭಾರತೀಯ ರೈತನ ಹೃದಯಕ್ಕೆ ಬಾಣದಲ್ಲಿ ಚುಚ್ಚಿದಂತಿದೆ. 21ನೇ ಶತಮಾನದಲ್ಲಿ ಹೆಚ್ಚು ಡೇಟಾ ಹೊಂದಿರುವ ದೇಶವೇ ಜಾಗತಿಕ ಪ್ರಭಾವ ಹೊಂದಿದೆ. ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವುದರಿಂದ ಗರಿಷ್ಠ ಡೇಟಾ ಇದೆ. ಅಮೆರಿಕಾಕ್ಕೆ ಚೀನಾವನ್ನು ಎದುರಿಸಲು ಭಾರತದ ಡೇಟಾ ಅಗತ್ಯವಾಗಿತ್ತು. ಈ ಅನ್ಯಾಯಕರ ಒಪ್ಪಂದದ ಮೂಲಕ ಭಾರತೀಯ ಡೇಟಾವನ್ನು ಅಮೆರಿಕಾಕ್ಕೆ ಒಪ್ಪಿಸಲಾಗುತ್ತದೆ ಎಂದು ಅವರು ಆರೋಪಿಸಿದರು.
ಈ ಕಾರ್ಯಕ್ರಮದಲ್ಲೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಂಪ್ ಅವರ ವರ್ತನೆಯನ್ನು ದೆಹಲಿಯ ಹದಿನೆಂಟನೇ ಸುಲ್ತಾನ್ ಮೊಹಮ್ಮದ್ ಬಿನ್ ತುಘಲಕ್ ಅವರೊಂದಿಗೆ ಹೋಲಿಸಿ, ಪ್ರಧಾನಿ ಮೋದಿಯನ್ನು ಜರ್ಮನಿಯ ಚಾನ್ಸಲರ್ ಅಡಾಲ್ಫ್ ಹಿಟ್ಲರ್ ಅವರೊಂದಿಗೆ ಹೋಲಿಕೆ ಮಾಡಿದರು.
ಈ ಒಪ್ಪಂದವು ನಮ್ಮ ರೈತರು ಮತ್ತು ಕೈಗಾರಿಕೆಗಳಿಗೆ ಹಾನಿಕಾರಕ. ನಿಜವಾದ ದೇಶಭಕ್ತರಾಗಿದ್ದರೆ, ಮೋದಿ ಅವರು ಭಾರತದ ಹಿತಾಸಕ್ತಿಯನ್ನು ಟ್ರಂಪ್ ಅವರಿಗೆ ಮಾರಿಬಿಡುತ್ತಿರಲಿಲ್ಲ. ನನ್ನ 60 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಭಯಭೀತ ಪ್ರಧಾನಿಯನ್ನು ನಾನು ನೋಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
Advertisement