

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೊರಗಿನ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದರೆಂದು ಭಾರತೀಯ ಜನತಾ ಪಾರ್ಟಿ ಹಲವು ಪುಸ್ತಕಗಳನ್ನು ಉಲ್ಲೇಖಿಸಿಆರೋಪಿಸಿದೆ. ಇಂತಹ ಹಳೆಯ ಘಟನೆಗಳನ್ನು ಮತ್ತಷ್ಟು ಬೆಳಕಿಗೆ ತಂದರೆ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಜನರ ಕಣ್ಣಿನಲ್ಲಿ ಉಳಿದ ಗೌರವವನ್ನೂ ಕಳೆದುಕೊಳ್ಳಲಿದ್ದಾರೆ ಎಂದು ಟೀಕಿಸಿದೆ.
ದೆಹಲಿಯಲ್ಲಿ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಇಂದಿರಾ ಗಾಂಧಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಅಮೆರಿಕದ ಗುಪ್ತಚರ ಸಂಸ್ಥೆ ಕೇಂದ್ರ ಗುಪ್ತಚರ ಸಂಸ್ಥೆ (CIA) ಹಾಗೂ ಆಗಿನ (ಕೆಜಿಬಿ – KGB) ಸೋವಿಯತ್ ಸಂಘದ ಪ್ರಮುಖ ಗುಪ್ತಚರ ಹಾಗೂ ಭದ್ರತಾ ಸಂಸ್ಥೆಯಿಂದ ಹಲವು ಸಂದರ್ಭಗಳಲ್ಲಿ ಹಣ ಸ್ವೀಕರಿಸಿತ್ತು ಎಂದು ಆರೋಪಿಸಿದರು.
ಭಾರತ–ಅಮೆರಿಕಾ ಮಧ್ಯಂತರ ವಾಣಿಜ್ಯ ಒಪ್ಪಂದದ ವಿಚಾರವಾಗಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಮಾಡುತ್ತಿರುವ ಆರೋಪಗಳನ್ನು “ಪ್ರಾಯೋಜಿತ ಮತ್ತು ಸಂಘಟಿತ ಪ್ರಚಾರ” ಎಂದು ತ್ರಿವೇದಿ ಟೀಕಿಸಿದರು.
ಕಾಂಗ್ರೆಸ್ ಅತ್ಯಂತ ಶಕ್ತಿಶಾಲಿ ನಾಯಕಿಯಾಗಿ ಪರಿಗಣಿಸುವ ಇಂದಿರಾ ಗಾಂಧಿಯವರ ಶರಣಾಗತಿ ಕಥೆಯನ್ನು ಸಂಕ್ಷಿಪ್ತವಾಗಿ ನಿಮ್ಮ ಮುಂದೆ ಮಂಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತು ಆರಂಭಿಸಿದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಕಾಂಗ್ರೆಸ್ ಸಿಐಎ ಮತ್ತು ಕೆಜಿಬಿಯಿಂದ ಹಣ ಪಡೆದಿದೆ ಎಂದು ಆರೋಪಿಸಿದ ತ್ರಿವೇದಿ, ಕೆಜಿಬಿಯ ನೇರ ಪ್ರಭಾವದಲ್ಲಿ ಭಾರತೀಯ ರೂಪಾಯಿ ವಿನಿಮಯ ದರವನ್ನು ರೂಬಲ್ ಎದುರು 8.33ರಿಂದ 10ಕ್ಕೆ ಏರಿಸಲಾಯಿತು, ಇದರಿಂದ ಸೋವಿಯತ್ ಸಂಘದಿಂದ ಹೆಚ್ಚಿನ ಆಮದುಗಳು ನಡೆಯಲು ಅವಕಾಶ ದೊರಕಿತು, ಇದಕ್ಕೆ ಭಾರತೀಯರು ಬೆಲೆ ತೆರಬೇಕಾಗಿ ಬಂತು ಎಂದರು.
ಪಾಕಿಸ್ತಾನ ತನ್ನ ಅಣುಪರೀಕ್ಷೆಗಳಿಗೆ ಸಿದ್ಧವಾಗುತ್ತಿದ್ದಾಗ ಅದರ ಕಹುಟಾ ರಿಯಾಕ್ಟರ್ ನ್ನು ನಾಶಪಡಿಸುವ ಪ್ರಸ್ತಾವನೆ ಮೂಡಿತ್ತು. ಇಸ್ರೇಲ್ ಸಹಾಯ ಮಾಡಲು ಸಿದ್ಧವಾಗಿದ್ದರೂ, ಆ ಯೋಜನೆ ಮುಂದುವರಿಸಲು ಇಂದಿರಾ ಗಾಂಧಿ ಒಪ್ಪಲಿಲ್ಲ ಎಂದು ಅವರು ಕೆಲವು ಪುಸ್ತಕಗಳ ಉಲ್ಲೇಖಗಳ ಆಧಾರದ ಮೇಲೆ ಹೇಳಿದರು.
ಕಾಂಗ್ರೆಸ್ ಹಳೆಯದನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದರೆ ಎಲ್ಲವೂ ನೆನಪಿಗೆ ಬರುತ್ತದೆ. ಹಳೆಯ ಪ್ರತಿಯೊಂದು ಪುಸ್ತಕವೂ ಬೆಳಕಿಗೆ ಬರುತ್ತದೆ ಎಂದರು.
Advertisement