

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನ 227 ವಾರ್ಡ್ಗಳ ಮತ ಎಣಿಕೆ ನಡೆಯುತ್ತಿರುವ ನಡುವೆ, ಶಿವಸೇನಾ ನಾಯಕಿ ಶೈನಾ ಎನ್ ಸಿ ಅವರು ಮಹಾರಾಷ್ಟ್ರ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಮಹಾಯುತಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಕ್ಸಿಟ್ ಪೋಲ್ ಗಳು ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಜಯದ ಮುನ್ಸೂಚನೆ ನೀಡಿವೆ. ಠಾಕ್ರೆ ಸಹೋದರರು ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿಫಲವಾಗಲಿವೆ ಎಂದು ಹೇಳಿವೆ.
ಈ ಬಗ್ಗೆ ಎಎನ್ ಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಶೈನಾ, ಎಕ್ಸಿಟ್ ಪೋಲ್ ಗಳು ಸಿನಿಮಾದ ಟ್ರೇಲರ್ ಇದ್ದಂತೆ. ರಾಜ್ಯದಲ್ಲಿ ಆಡಳಿತ ಮೈತ್ರಿಕೂಟ ಮಾಡಿದ ಅಭಿವೃದ್ಧಿ ಪ್ರಗತಿಯಿಂದ ಜನರು ನಮ್ಮ ಕೈಹಿಡಿಯುತ್ತಾರೆ. ಇನ್ನೆರಡು ಗಂಟೆಗಳಲ್ಲಿ ಫಲಿತಾಂಶ ಹೊರಬೀಳುತ್ತದೆ. ಅಭಿವೃದ್ಧಿ ಮತ್ತು ಏಕನಾಥ್ ಶಿಂಧೆ ಅವರ ಪ್ರಗತಿಯ ಕೆಲಸದ ಆಧಾರದ ಮೇಲೆ ಸಾರ್ವಜನಿಕರು 29 ಮಹಾನಗರ ಪಾಲಿಕೆಗಳಿಗೆ ಜನಾದೇಶವನ್ನು ನಿರ್ಧರಿಸುತ್ತಾರೆ ಎಂದರು.
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ಚುನಾವಣಾ ಅಕ್ರಮಗಳ ಆರೋಪಗಳು, ಅಳಿಸಲಾಗದ ಶಾಯಿ ಹಾಕುವ ಕ್ರಮ ತೆಗೆದುಹಾಕಿದ್ದು, ಮತ ಯಂತ್ರದ ಮಾಹಿತಿಯಿಲ್ಲದ ಬಳಕೆ, ಪಡು (ಮುದ್ರಣ ಸಹಾಯಕ ಪ್ರದರ್ಶನ ಘಟಕ) ಸೇರಿದಂತೆ ಇತರ ಆರೋಪಗಳಿಗೆ ಪ್ರತಿಕ್ರಿಯಿಸಿದ ಶೈನಾ, ವಿರೋಧ ಪಕ್ಷದ ಆರೋಪಗಳನ್ನು ಪ್ರಶ್ನಿಸಿದರು. ಠಾಕ್ರೆ ಅವರು ತಮ್ಮ ಆರೋಪಗಳನ್ನು ಬದಲಿಸಬೇಕು ಎಂದರು.
ಉದ್ಧವ್ ಠಾಕ್ರೆ ತಮ್ಮ ಸ್ಕ್ರಿಪ್ಟ್ ಬರಹಗಾರರನ್ನು ಬದಲಾಯಿಸಬೇಕು, ಸೋಲು ಮತ್ತು ಗೆಲುವಿನ ತೀರ್ಪು ಸಾರ್ವಜನಿಕರಿಂದ ನಿರ್ಧರಿಸಲ್ಪಡುತ್ತದೆ. ಅವಕಾಶವು ತಳಮಟ್ಟದಿಂದ ಕೆಲಸ ಮಾಡುವವರ ಕೈಹಿಡಿಯುತ್ತದೆ. ತಮ್ಮ ಮನೆಯಿಂದಲೇ ಕೆಲಸ ಮಾಡುವವರು ಮನೆಯಲ್ಲಿಯೇ ಇರಬೇಕಾಗುತ್ತದೆ ಎಂಬ ಸಂದೇಶವನ್ನು ಮತದಾರರು ನೀಡುತ್ತಾರೆ ಎಂದರು.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯ ಮತ ಎಣಿಕೆಯಿಂದ ವರದಿಯಾದ ಆರಂಭಿಕ ಟ್ರೆಂಡ್ ಪ್ರಕಾರ, ಭಾರತೀಯ ಜನತಾ ಪಕ್ಷ-ಶಿವಸೇನೆ ಮಹಾಯುತಿ ಮೈತ್ರಿಕೂಟವು ಸುಮಾರು 75 ವಾರ್ಡ್ಗಳಲ್ಲಿ ಮುನ್ನಡೆ ಸಾಧಿಸಿದೆ.
Advertisement