

ನವದೆಹಲಿ: 77ನೇ ಗಣರಾಜ್ಯೋತ್ಸವದ ನಿಮಿತ್ತ ನವದೆಹಲಿಯ ಕರ್ತವ್ಯಪಥಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಡುಗೆಯ ಶೈಲಿ ಎಲ್ಲರನ್ನು ಆಕರ್ಷಿಸಿತು. ಅವರು ಧರಿಸಿದ್ದ ಪೇಟ ವಿಶೇಷವಾಗಿತ್ತು.
ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸೋಮವಾರ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಮೋದಿ ಅವರು. ಪ್ರತಿ ವರ್ಷದಂತೆ ಈ ವರ್ಷವೂ ವಿಶಿಷ್ಟ ಪೇಟ ಧರಿಸಿ ಜನತೆಯ ಗಮನಸೆಳೆದಿದ್ದಾರೆ.
ಪ್ರಧಾನಿಯವರು ಈ ಬಾರಿ ಕೆಂಪು ಹಾಗೂ ಹಳದಿ ಬಣ್ಣದ ರೇಷ್ಮೆ ಜರಿ ಇರುವ ರಾಜಸ್ಥಾನ ರಾಜ್ಯದ ಸಾಂಪ್ರದಾಯಿಕ ಪೇಟವನ್ನು ಧರಿಸಿದ್ದಾರೆ. ಈ ವರ್ಷ ಮೋದಿ ಅವರು ನೀಲಿ ಕುರ್ತಾವನ್ನು ಧರಿಸಿದ್ದಾರೆ. ಜೊತೆಗೆ ತಿಳಿ ನೀಲಿ ಬಣ್ಣದ ಜಾಕೆಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿದ್ದಾರೆ.
ಪ್ರತಿ ಬಾರಿಯೂ ಪ್ರಧಾನಿಯವರ ಪೇಟ ಆಕರ್ಷಕವಾಗಿರುತ್ತದೆ. ಈ ಬಾರಿ ಪ್ರಧಾನಿಯವರು ಯಾವ ಬಣ್ಣದ ಪೇಟ ತೊಡುತ್ತಾರೆ ಎಂಬ ಕುತೂಹಲ ಜನರಲ್ಲಿ ಇತ್ತು. ಅಂತೆಯೇ ಇಂದು ಗಣರಾಜ್ಯೋತ್ಸವ ಪರೇಡ್ಗೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸುತ್ತಿದ್ದಂತೆಯೇ ಅವರು ಧರಿಸಿರುವ ಉಡುಪಿನ ಫಸ್ಟ್ ಲುಕ್ ಬಹಿರಂಗವಾಯಿತು.
ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ಎರಡು ಸಂದರ್ಭಗಳಲ್ಲಿ ಪ್ರಧಾನಿಯವರ ಉಡುಗೆಯ ಆಯ್ಕೆಯು ಹೆಚ್ಚಿನ ಗಮನವನ್ನು ಸೆಳೆಯುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಪ್ರಧಾನಿಯವರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುತ್ತಾರೆ. ವಾಸ್ತವವಾಗಿ ಪ್ರಧಾನಿಯವರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸಂಸ್ಕೃತಿಯ ಬಗ್ಗೆ ಗೌರವವನ್ನು ತೋರಿಸುವ ಪ್ರಯತ್ನ ಮಾಡುತ್ತಾರೆ.
Advertisement