

ಚೆನ್ನೈ: ಇನ್ನುಮುಂದೆ ತಮಿಳುನಾಡು ಸರ್ಕಾರ ಖರೀದಿಸುವ ಎಲ್ಲ ಸರ್ಕಾರಿ ಬಸ್ಗಳು ಹವಾನಿಯಂತ್ರಿತ (AC) ಸೌಲಭ್ಯ ಹೊಂದಿರಲಿವೆ ಎಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಿರ್ದೇಶನ ನೀಡಿದ್ದಾರೆ ಎಂದು ಸಾರಿಗೆ ಸಚಿವ ವಿಜಯ್ ತಮಿಳನ್ ಪಾರ್ಥಿಬನ್ ತಿಳಿಸಿದ್ದಾರೆ.
ಇನ್ನುಮುಂದೆ ತಮಿಳುನಾಡಿನ ಸಾರ್ವಜನಿಕರು ಎಸಿ ಬಸ್ಗಳಲ್ಲೇ ಪ್ರಯಾಣಿಸಬೇಕು. ಅದರಂತೆ, ಇನ್ನು ಮುಂದೆ ಖರೀದಿಸಲಾಗುವ ಎಲ್ಲ ಹೊಸ ಸರ್ಕಾರಿ ಬಸ್ಗಳು ಕಡ್ಡಾಯವಾಗಿ ಎಸಿ ಸೌಲಭ್ಯ ಹೊಂದಿರಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ ಎಂದು ಪಾರ್ಥಿಬನ್ ಹೇಳಿದ್ದಾರೆ.
ರಾಜ್ಯದ ಪ್ರತಿಯೊಂದು ದೂರದ ಪ್ರದೇಶಕ್ಕೂ ಸಮರ್ಪಕ ಮತ್ತು ಬಲಿಷ್ಠ ಬಸ್ ಜಾಲದ ಮೂಲಕ ಸಂಪರ್ಕ ಕಲ್ಪಿಸುವುದು ಮುಖ್ಯಮಂತ್ರಿಗಳ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಘೋಷಣೆಯು ಮುಖ್ಯಮಂತ್ರಿ ವಿಜಯ್ ಇತ್ತೀಚೆಗೆ ಚೆನ್ನೈಯ ಕಾಮರಾಜರ್ ಸಲೈ, ಮರೀನಾ ಬೀಚ್ ಸಮೀಪ ರಾಜ್ಯ ಸರ್ಕಾರ ಆಯೋಜಿಸಿದ್ದ "ಸ್ಟಾರ್ಟ್ ರನ್, ಸ್ಟಾಪ್ ಡ್ರಗ್ಸ್" ಮಾದಕವಸ್ತು ವಿರೋಧಿ ಮ್ಯಾರಥಾನ್ಗೆ ನೇತೃತ್ವ ವಹಿಸಿದ ಕೆಲವೇ ದಿನಗಳ ನಂತರ ಬಂದಿದೆ.
52 ವರ್ಷದ ಮುಖ್ಯಮಂತ್ರಿ ವಿಜಯ್ ಅವರು ಸಂಪುಟ ಸಚಿವರಾದ ಆಧವ್ ಅರ್ಜುನಾ, ಪಿ. ವೆಂಕಟರಾಮಣನ್ ಹಾಗೂ ಮುಖ್ಯ ಕಾರ್ಯದರ್ಶಿ ಎಂ. ಸಾಯಿ ಕುಮಾರ್ ಅವರೊಂದಿಗೆ 3 ಕಿ.ಮೀ. ಮ್ಯಾರಥಾನ್ ನ್ನು ಸಂಪೂರ್ಣವಾಗಿ ಓಡಿದರು.
ಮ್ಯಾರಥಾನ್ಗೆ ಮುನ್ನ ವಿಜಯ್ ಅವರು ಮಾದಕವಸ್ತು ವಿರೋಧಿ ಪ್ರತಿಜ್ಞೆ ಬೋಧಿಸಿ, ಮಾದಕವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಕುಟುಂಬದವರು ಮತ್ತು ಸ್ನೇಹಿತರಲ್ಲಿ ಜಾಗೃತಿ ಮೂಡಿಸುವಂತೆ ಭಾಗವಹಿಸಿದವರಿಗೆ ಕರೆ ನೀಡಿದರು.
ಅಲ್ಲದೆ, "Sports Edu, Drugs Vidu" (ಕ್ರೀಡೆ ಅಳವಡಿಸಿಕೊಳ್ಳಿ, ಮಾದಕವಸ್ತು ಬಿಡಿ) ಎಂಬ ತಮಿಳು ಸಂದೇಶವಿದ್ದ ಬ್ಯಾನರ್ಗೆ ಸಹಿ ಹಾಕಿದರು. ಈ ಕಾರ್ಯಕ್ರಮವನ್ನು ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (SDAT) ಆಯೋಜಿಸಿತ್ತು.
ಇತ್ತೀಚೆಗೆ ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಮೇಕೆದಾಟು ಅಣೆಕಟ್ಟು ಯೋಜನೆ, ಮೀನುಗಾರರ ಬಂಧನ ಹಾಗೂ ತಮಿಳು ಪ್ರಾರ್ಥನಾ ಗೀತೆಯ ವಿವಾದ ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಚರ್ಚಿಸಿದ್ದರು.
ಅದರ ಜೊತೆಗೆ, ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ತಮಿಳುನಾಡಿನ ಅಭಿವೃದ್ಧಿಗೆ ಪ್ರಮುಖವಾದ ಬಂದರುಗಳು, ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ ಯೋಜನೆಗಳು ಹಾಗೂ ಕೈಗಾರಿಕಾ ಕಾರಿಡಾರ್ಗಳಿಗೆ ಆದ್ಯತೆ ಆಧಾರಿತ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದರು.