

ಸತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಬಾವಿಗೆ ಬಿದ್ದಿದ್ದ ಹೋರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
40 ಅಡಿ ಆಳದ ಬಾವಿಗೆ ಬಿದ್ದ ಹೋರಿಯನ್ನು ರಕ್ಷಿಸಲು ನಾಲ್ವರು ಗ್ರಾಮಸ್ಥರು ಒಬ್ಬರ ನಂತರ ಒಬ್ಬರು ಇಳಿದಿದ್ದಾರೆ. ಆದರೆ ಅವರಲ್ಲಿ ಮೂವರು ವಿಷಕಾರಿ ಅನಿಲ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ್ದು, ಬದುಕುಳಿದ ಒಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖರಂಸೆಡಾ ಗ್ರಾಮದ ಅಹಿರಾನ್ ಟೋಲಾದಲ್ಲಿ ಶುಕ್ರವಾರ ರಾತ್ರಿ 8.30 ರ ಸುಮಾರಿಗೆ ಈ ಘೋರ ದುರಂತ ಸಂಭವಿಸಿದೆ ಎಂದು ಅಮರ್ಪಟಾನ್ ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ಸಿಂಗ್ ಪಾರ್ಸ್ಟೆ ಹೇಳಿದ್ದಾರೆ.
ರಾಮನಿವಾಸ್ ಕುಶ್ವಾಹ ಎಂಬವರಿಗೆ ಸೇರಿದ ಬಾವಿಗೆ ಒಂದು ಹೋರಿ ಬಿದ್ದಿದೆ, ಅದನ್ನು ರಕ್ಷಿಸಲು ನಾಲ್ವರು ಗ್ರಾಮಸ್ಥರು ಹಗ್ಗದ ಸಹಾಯದಿಂದ ಒಬ್ಬೊಬ್ಬರಾಗಿ ಬಾವಿಗೆ ಇಳಿದರು. ಆದರೆ ಅವರು ಕೆಳಭಾಗವನ್ನು ತಲುಪಿದಾಗ ಪ್ರಜ್ಞೆ ತಪ್ಪಿದ್ದಾರೆ.
ಗ್ರಾಮಸ್ಥರು ನಾಲ್ವರು ಪುರುಷರನ್ನು ಹೊರತೆಗೆದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ರಾಹುಲ್ ಯಾದವ್(36), ವೀರೇಂದ್ರ ಯಾದವ್(40) ಮತ್ತು ಕೃಷ್ಣದತ್ ಯಾದವ್(26) ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಪಾರ್ಸ್ಟೆ ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ರಾಮಚಂದ್ರ ಯಾದವ್ (50) ಅವರನ್ನು ಸತ್ನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.
ಆಮ್ಲಜನಕದ ಕೊರತೆ ಮತ್ತು ಬಾವಿಯೊಳಗಿನ ವಿಷಕಾರಿ ಅನಿಲದಿಂದ ನಾಲ್ವರು ಪ್ರಜ್ಞಾಹೀನರಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಮೃತರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.