

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇತ್ತೀಚಿನ ಸಂಘರ್ಷದಿಂದ ಭಾರತದ ರಸಗೊಬ್ಬರ ಪೂರೈಕೆ ಸರಪಳಿ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ದೇಶಕ್ಕೆ ರಸಗೊಬ್ಬರ ಮತ್ತು ಕಚ್ಚಾ ವಸ್ತುಗಳನ್ನು ಸಾಗಿಸುವ 20 ಹಡಗುಗಳಲ್ಲಿ 15 ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಭಾನುವಾರ ತಿಳಿಸಿದೆ.
ಇವುಗಳಲ್ಲಿ ಎಂಟು ಹಡಗುಗಳು 3.32 ಲಕ್ಷ ಟನ್ ಯೂರಿಯಾವನ್ನು ಸಾಗಿಸುತ್ತಿವೆ. ನಾಲ್ಕು ಹಡಗುಗಳು 2.57 ಲಕ್ಷ ಟನ್ ಡಿಎಪಿಯನ್ನು ಸಾಗಿಸುತ್ತಿವೆ ಮತ್ತು ಮೂರು ಹಡಗುಗಳು 1.11 ಲಕ್ಷ ಟನ್ ಸಲ್ಫರ್ ಅನ್ನು ಹೊಂದಿವೆ.
ಇವೆಲ್ಲವೂ ನಿಗದಿತ ವೇಳಾಪಟ್ಟಿಯ ಪ್ರಕಾರ ಭಾರತೀಯ ಬಂದರುಗಳಿಗೆ ರಸಗೊಬ್ಬರ ಸಾಗಿಸುವ ನಿರೀಕ್ಷೆಯಿದೆ. ತಲಾ 0.25 ಲಕ್ಷ ಟನ್ ಅಮೋನಿಯಾ ಮತ್ತು 0.45 ಲಕ್ಷ ಟನ್ ಯೂರಿಯಾವನ್ನು ಸಾಗಿಸುವ ಐದು ಹಡಗುಗಳು ಕೂಡಾ ಇವೆ.
ಪ್ರಸ್ತುತ ಎರಡು ಹೆಚ್ಚುವರಿ ಯೂರಿಯಾ ಹಡಗುಗಳು ಮತ್ತು ಒಂದು ಸಲ್ಫರ್ ಹಡಗಿನಲ್ಲಿ ಲೋಡಿಂಗ್ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದ ಜಲಸಂಧಿಯ ಮೂಲಕ ಸಮುದ್ರ ಸಂಚಾರಕ್ಕೆ ಅಡ್ಡಿಯಾದರೂ "ಸಕಾಲಿಕ ಯೋಜನೆ, ಪರಿಣಾಮಕಾರಿ ಸಮನ್ವಯ ಮತ್ತು ನಿರಂತರ ಮೇಲ್ವಿಚಾರಣೆಯ ಮೂಲಕ" ನಿರಂತರ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಿಕೊಂಡಿದೆ ಎಂದು ಕೇಂದ್ರ ಹೇಳಿದೆ.
ಓಮನ್, ಮಲೇಷ್ಯಾ, ವಿಯೆಟ್ನಾಂ, ಜಾರ್ಜಿಯಾ, ನೈಜೀರಿಯಾ, ರಷ್ಯಾ, ಫಿನ್ಲ್ಯಾಂಡ್, ಈಜಿಪ್ಟ್, ಅಲ್ಜೀರಿಯಾ, ಟರ್ಕಿಯೆ ಮತ್ತು ನೆದರ್ಲ್ಯಾಂಡ್ಸ್ನಿಂದ ಯೂರಿಯಾ ಸರಬರಾಜು ವ್ಯವಸ್ಥೆ ಮಾಡಲಾಗಿದೆ.
DAP ಮತ್ತು NPK ಗಾಗಿ, ರಷ್ಯಾ, ಮೊರಾಕೊ, ಈಜಿಪ್ಟ್, ಯುಎಸ್, ಜೋರ್ಡಾನ್, ದಕ್ಷಿಣ ಕೊರಿಯಾ, ಟುನೀಶಿಯಾ ಮತ್ತು ಸೌದಿ ಅರೇಬಿಯಾದಿಂದ ಕೆಂಪು ಸಮುದ್ರ ಮಾರ್ಗದ ಮೂಲಕ ಭಾರತ ಸರಕುಗಳನ್ನು ಪಡೆದುಕೊಂಡಿದೆ.