

ಪುಣೆ: ಪುಣೆ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಯ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗವಾಗಿದ್ದು, ಪ್ರಕರಣದ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ, ಕೊಲೆ ಮಾಡುವ ಕೆಲವು ತಿಂಗಳ ಹಿಂದೆಯೇ ರಹಸ್ಯವಾಗಿ ಮದುವೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಜೂನ್ 18 ರಂದು ಪುಣೆ ಜಿಲ್ಲೆಯ ಲೋಹಗಡ್ ಕೋಟೆಯಲ್ಲಿ 25 ವರ್ಷದ ಕೇತನ್ ಅಗರ್ವಾಲ್ ಅವರನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿದ ಆರೋಪದ ಮೇಲೆ ಸಿಯಾ ಗೋಯಲ್ (20) ಮತ್ತು ಚೇತನ್ ಚೌಧರಿ(22)ಯನ್ನು ಬಂಧಿಸಲಾಗಿದೆ. ಅಗರ್ವಾಲ್ ಮತ್ತು ಸಿಯಾ ಈ ವರ್ಷದ ನವೆಂಬರ್ನಲ್ಲಿ ವಿವಾಹವಾಗಲು ಸಿದ್ಧರಾಗಿದ್ದರು.
"ಸಿಯಾ ಮತ್ತು ಚೇತನ್ ನಡುವೆ ವಿನಿಮಯವಾದ ಚಾಟ್ಗಳ ವಿಶ್ಲೇಷಣೆಯು, ಅವರು ರಹಸ್ಯವಾಗಿ ವಿವಾಹವಾಗಿದ್ದರು ಎಂದು ಸೂಚಿಸುತ್ತದೆ. ಅವರ ವಿವಾಹದ ಬಗ್ಗೆಯೂ ದೃಢೀಕರಿಸದ ವರದಿಗಳಿವೆ. ನಾವು ಈ ಹೇಳಿಕೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆಯೇ ಎಂದು ಪರಿಶೀಲಿಸುತ್ತಿದ್ದೇವೆ" ಎಂದು ಪುಣೆ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಸತ್ಯವೋ ಅಥವಾ ಸುಳ್ಳೋ, ವಿಶೇಷ ವಿವಾಹ ಕಾಯ್ದೆಯಡಿ ಪ್ರಮಾಣ ಪತ್ರ ಇದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಪುಣೆ ಗ್ರಾಮೀಣ ಪೊಲೀಸರು ನೋಂದಾಯಿತ ಕಚೇರಿಯಲ್ಲಿ ತನಿಖೆ ನಡೆಸುತ್ತಿದ್ದಾರೆ
ಅಗರ್ವಾಲ್ ಹತ್ಯೆಯ ಹಿಂದಿನ ಪಿತೂರಿಯ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ, ಮೊಬೈಲ್ ಫೋನ್ ಡೇಟಾ ಮತ್ತು ಚಾಟ್ ದಾಖಲೆಗಳು ಸೇರಿದಂತೆ ಆರೋಪಿಗಳಿಂದ ವಶಪಡಿಸಿಕೊಂಡ ಡಿಜಿಟಲ್ ಪುರಾವೆಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಗೋಯಲ್ ಮತ್ತು ಚೌಧರಿ ಸಂಬಂಧಕ್ಕೆ ಅಗರ್ವಾಲ್ ಅವರು ಅಡ್ಡಿಯಾಗುತ್ತಿದ್ದಂತೆ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಇವರಿಬ್ಬರ ಮದುವೆಗೆ ಸಿಯಾಳ ಕಾಲೇಜು ಸ್ನೇಹಿತರೇ ಸಾಕ್ಷಿದಾರರಾಗಿ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇಷ್ಟೇ ಅಲ್ಲದೆ ಸಿಯಾ ಮತ್ತು ಚೇತನ್ ಹಾರ ಧರಿಸಿ ನಿಂತಿರುವ ಫೋಟೋಗಳನ್ನು ಪ್ರೈವೇಟ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಇದನ್ನು ಅಳಿಸಿಹಾಕಿರುವುದರಿಂದ ಫೋಟೋಗಳನ್ನು ಮರುಪಡೆಯಲು ಪೊಲೀಸರ ತಾಂತ್ರಿಕವಾಗಿ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.