

ನವದೆಹಲಿ: ಸೆಪ್ಟೆಂಬರ್ 2025 ರ ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಮತ್ತು ಆಡಳಿತಾರೂಢ ಟಿವಿಕೆ ವಿರುದ್ಧ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಡಿಎಂಕೆಗೆ ಛೀಮಾರಿ ಹಾಕಿದೆ.
ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಪೀಠ "ಮುಖ್ಯಮಂತ್ರಿಗಳ ಭಾಷಣಗಳು ಮತ್ತು ಭೇಟಿಗಳನ್ನು ನಿಯಂತ್ರಿಸಲು" ದ್ರಾವಿಡ ಮುನ್ನೇತ್ರ ಕಳಗಂ ಸಲ್ಲಿಸಿದ ಅರ್ಜಿಯ ಬಗ್ಗೆ ತನ್ನ ಅಸಮಾಧಾನವನ್ನು ಘೋಷಿಸಿತು ಮತ್ತು ರಾಜಕೀಯ ದ್ವೇಷಗಳನ್ನು ಇತ್ಯರ್ಥಪಡಿಸಿಕೊಳ್ಳಲು ಉನ್ನತ ನ್ಯಾಯಾಂಗ ವೇದಿಕೆಯನ್ನು ಬಳಸಿದ್ದಕ್ಕಾಗಿ ವಿರೋಧ ಪಕ್ಷವನ್ನು ಟೀಕಿಸಿತು.
"ನೀವು ನಿಖರವಾಗಿ ಏನು ಹೇಳಲು ಪ್ರಯತ್ನಿಸುತ್ತಿದ್ದೀರಿ? ಮುಖ್ಯಮಂತ್ರಿ ಏನು ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಬೇಕೆಂದು ನೀವು ಬಯಸುತ್ತೀರಾ?" ನ್ಯಾಯಾಲಯ ಅಚ್ಚರಿಯಿಂದ ಕೇಳಿದ್ದು "ಮುಖ್ಯಮಂತ್ರಿ ವಿಜಯ್ ಆರೋಪಿಯಲ್ಲ." ಎಂದು ಹೇಳಿದೆ.
"ವಾಕ್ ಸ್ವಾತಂತ್ರ್ಯದ ಮೇಲೆ ನೀವು ತಡೆಯಾಜ್ಞೆ ಬಯಸುತ್ತೀರಾ? ನೀವು ನಿಮ್ಮ ಸ್ವಂತ ಭಾಷಣ ಮಾಡುತ್ತೀರಿ. ಸಿಬಿಐ ತನಿಖೆಗೆ ನೇಮಿಸಲಾದ ವಿಷಯದಲ್ಲಿ, ರಾಜಕೀಯ ಪ್ರತಿಸ್ಪರ್ಧಿಯ ಹೇಳಿಕೆಯ ವಿರುದ್ಧ ಸುಪ್ರೀಂ ಕೋರ್ಟ್ ಹೇಗೆ ಆದೇಶಗಳನ್ನು ನೀಡಬಹುದು?" ಎಂದು ಸಿಟ್ಟಿಗೆದ್ದ ನ್ಯಾಯಾಲಯ ಡಿಎಂಕೆ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರನ್ನು ಕೇಳಿತು. ನಂತರ ಡಿಎಂಕೆ ಮನವಿಯನ್ನು ಹಿಂಪಡೆಯುವುದಾಗಿ ವಿನಂತಿಸಿದ್ದು, ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
ತಮಿಳ ವೆಟ್ರಿ ಕಳಗಂನ ವಿಜಯ್ ಮತ್ತು ಇತರ ಸದಸ್ಯರು ಸಾಕ್ಷಿಗಳನ್ನು 'ಪ್ರಭಾವಿಸಬಹುದು' ಎಂದು ಅರ್ಜಿದಾರರು ಹೇಳಿದ ನಂತರ ನ್ಯಾಯಾಲಯ ಅರ್ಜಿಯನ್ನು ತುರ್ತು ಆಧಾರದ ಮೇಲೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿತು.
ಜುಲೈ 10 ರಂದು ಮುಖ್ಯಮಂತ್ರಿ ಕರೂರ್ಗೆ ಭೇಟಿ ನೀಡುವ ಪ್ರಸ್ತಾಪವನ್ನು ಉಲ್ಲೇಖಿಸಲಾಗಿದೆ. ಕರೂರ್ ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ನಡೆಸಿದ ಚುನಾವಣಾ ಪೂರ್ವ ರ್ಯಾಲಿಯಲ್ಲಿ ಕಾಲ್ತುಳಿತದಿಂದ 41 ಜನರು ಸಾವನ್ನಪ್ಪಿದ ಜಿಲ್ಲೆಯಾಗಿದೆ.
ಉದ್ಯೋಗ ಪತ್ರಗಳು ಮತ್ತು ಆರ್ಥಿಕ ಸಹಾಯವನ್ನು ನೀಡುವುದು, ಈಗ ನಡೆಯುತ್ತಿರುವ ಸಿಬಿಐ ತನಿಖೆಯ ಭಾಗವಾಗಿರಬಹುದಾದ ಸಾಕ್ಷಿಗಳ ಮೇಲೆ ಬೀರುತ್ತಿರುವ 'ಪ್ರಭಾವ' ಎಂದು ಅರ್ಥೈಸಬಹುದು ಎಂದು ಡಿಎಂಕೆ ಅರ್ಜಿಯಲ್ಲಿ ಹೇಳಿತ್ತು. ಟಿವಿಕೆ ನಾಯಕ ಆಧವ್ ಅರ್ಜುನ ಅವರ ಜುಲೈ 2 ರ ಹೇಳಿಕೆಗೆ ವಿರೋಧ ಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು.
ಕಾಲುತುಳಿತದ ಸಮಯದಲ್ಲಿ ಅಧಿಕಾರದಲ್ಲಿದ್ದ ಡಿಎಂಕೆ ಪಕ್ಷ "ಕರೂರಿನ ಜನರನ್ನು ಪೊಲೀಸರ ಮೂಲಕ ಕೊಂದಿತು" ಎಂದು ಆಧವ್ ಅರ್ಜುನ ಹೇಳಿದ್ದರು.
2025 ರ ಸೆಪ್ಟೆಂಬರ್ನಲ್ಲಿ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ವಿಜಯ್ ಚುನಾವಣಾ ಪ್ರಚಾರ ಭಾಷಣಕ್ಕಾಗಿ ದೊಡ್ಡ ಜನಸಮೂಹ ಕಾಯುತ್ತಿದ್ದಾಗ ಕಾಲ್ತುಳಿತ ಉಂಟಾಗಿ 41 ಜನರು ಸಾವನ್ನಪ್ಪಿದರು. ಈ ವಿಪತ್ತು ನಟ-ರಾಜಕಾರಣಿ ಮತ್ತು ಅವರ ಪಕ್ಷ ತೀವ್ರ ರಾಜಕೀಯ ಪ್ರತಿಕ್ರಿಯೆ ಎದುರಿಸುವಂತೆ ಮಾಡಿತ್ತು.
ಮಾರ್ಚ್ನಲ್ಲಿ ಆಗ ಅವರ ತಮಿಳಗ ವೆಟ್ರಿ ಕಳಗಂನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ವಿಜಯ್ ಮೂರನೇ ಸುತ್ತಿನ ವಿಚಾರಣೆಗಾಗಿ ಸಿಬಿಐ ಮುಂದೆ ಹಾಜರಾಗಿದ್ದರು. ಕಾಲ್ತುಳಿತದ ಒಂದು ತಿಂಗಳ ನಂತರ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಫೆಡರಲ್ ಸಂಸ್ಥೆ ತನಿಖೆಯನ್ನು ವಹಿಸಿಕೊಂಡಿತು.