

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಅವರ ಬಲ ಭುಜದ ಶಸ್ತ್ರಚಿಕಿತ್ಸೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ವರದಿಗಳ ಪ್ರಕಾರ, ಪವನ್ ಕಲ್ಯಾಣ್ ಅವರನ್ನು ದೀರ್ಘಕಾಲದ ಭುಜದ ಸಮಸ್ಯೆಯ ಚಿಕಿತ್ಸೆಗಾಗಿ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಪರೀಕ್ಷೆಯಲ್ಲಿ ಎರಡೂ ಭುಜಗಳ ರೋಟೇಟರ್ ಕಫ್ ಮತ್ತು ಸ್ನಾಯುಗಳಿಗೆ ಗಂಭೀರ ಗಾಯಗಳಾಗಿದ್ದು ಇದರಿಂದ ತೀವ್ರ ನೋವು ಅನುಭವಿಸುತ್ತಿದ್ದರು.
ವೈದ್ಯರ ಸಲಹೆಯ ಪ್ರಕಾರ, ಎರಡೂ ಭುಜಗಳ ಮೇಲೆ ಏಕಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡುವುದರಿಂದ ಚೇತರಿಕೆಯ ಸಮಯ ಹೆಚ್ಚಾಗಬಹುದು. ಆದ್ದರಿಂದ, ಸದ್ಯಕ್ಕೆ ಬಲ ಭುಜಕ್ಕೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸುಮಾರು ಮೂರೂವರೆ ಗಂಟೆಗಳ ಕಾಲ ನಡೆಯಿತು. ಆಸ್ಪತ್ರೆಯ ಪ್ರಕಾರ, ಸುಮಾರು ಎರಡು ತಿಂಗಳ ನಂತರ ಎಡ ಭುಜಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗುವುದು.
ಏತನ್ಮಧ್ಯೆ, ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಭೇಟಿ ನೀಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಪವನ್ ಕಲ್ಯಾಣ್ ಅವರ ಆರೋಗ್ಯ ವಿಚಾರಿಸಿದರು. ಪವನ್ ಕಲ್ಯಾಣ್ ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದ್ದು ನುರಿತ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎರಡೂ ಭುಜಗಳಲ್ಲಿ ತೀವ್ರವಾದ ರೋಟೇಟರ್ ಕಫ್ ಗಾಯಗಳು ಕಂಡುಬಂದವು. ಮೊದಲು ಬಲ ಭುಜಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಯಿತು. 2016ರಲ್ಲಿ ಅವರಿಗೆ ನೋವು ಶುರುವಾಗಿತ್ತು.