

ನವದೆಹಲಿ: ಎಥೆನಾಲ್-ಮಿಶ್ರಿತ(E20) ಪೆಟ್ರೋಲ್ ನೀತಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಗುರಿಯಾಗಿಸಿಕೊಂಡು ಮಾನನಷ್ಟಕರ ಡಿಜಿಟಲ್ ಅಭಿಯಾನ ನಡೆಸಿದ್ದಕ್ಕಾಗಿ ನಾಗಪುರ ಸೈಬರ್ ಪೊಲೀಸರು ಹಲವು ಸಾಮಾಜಿಕ ಮಾಧ್ಯಮ ಕಂಟೆಂಟ್ ಕ್ರಿಯೇಟರ್ಗಳ ವಿರುದ್ಧ FIR ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರದ ಎಥೆನಾಲ್-ಮಿಶ್ರಿತ(E20) ಇಂಧನ ನೀತಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಆನ್ಲೈನ್ ಪೋಸ್ಟ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
"ಸ್ವೀಕರಿಸಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ವ್ಯಕ್ತಿಗಳ ಹೆಸರುಗಳು ಮತ್ತು ಪೋಸ್ಟ್ಗಳ ಸ್ವರೂಪ ಹಾಗೂ ಕೆಲವು ಜನರು ಮಾಡಿದ ಅಶ್ಲೀಲ ಅಥವಾ ನಿಂದನೀಯ ಕಾಮೆಂಟ್ಗಳನ್ನು ವಿವರಿಸಲಾಗಿದೆ. ಪೊಲೀಸರು ಪ್ರಸ್ತುತ ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..." ಎಂದು ನಾಗ್ಪುರದ ಜಂಟಿ ಪೊಲೀಸ್ ಆಯುಕ್ತ ನವೀನ್ಚಂದ್ರ ರೆಡ್ಡಿ ಅವರು ಹೇಳಿದ್ದಾರೆ.
ಈ ಸಂಬಂಧ ಬಿಜೆಪಿ ನಾಗಪುರ ನಗರ ಸಾಮಾಜಿಕ ಮಾಧ್ಯಮ ಕೋಶದ ಸಂಚಾಲಕ ಶಿಶಿರ್ ಅರುಣ್ ತ್ರಿಪಾಠಿ ಅವರು ದೂರ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಜುಲೈ 3, 2026 ರಂದು ಕಂಟೆಂಟ್ ಸೃಷ್ಟಿಕರ್ತ ಮನೀಶ್ ಕಶ್ಯಪ್ ಅವರು ಅಪ್ಲೋಡ್ ಮಾಡಿದ ಯೂಟ್ಯೂಬ್ ವಿಡಿಯೋದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಗಡ್ಕರಿ ಮತ್ತು ಎಥೆನಾಲ್ (E20) ಇಂಧನದ ಕುರಿತು ಸುಳ್ಳು, ಮಾನನಷ್ಟಕರ ಮತ್ತು ದಾರಿತಪ್ಪಿಸುವ ಆರೋಪಗಳಿಗೆ ಎಂದು ಹೇಳಲಾಗಿದೆ.
'ದೇಸಿ ಬಾಯ್ಸ್', 'ಹರ್ಷಿತ್ ರಥಿ' ಮತ್ತು 'ಅಂಕಲೇಶ್ ಇನ್ವತಿ' ಸೇರಿದಂತೆ ಇತರ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಖಾತೆಗಳ ಮೂಲಕ ಇದೇ ರೀತಿಯ ದಾರಿತಪ್ಪಿಸುವ ವೀಡಿಯೊಗಳು ಮತ್ತು ಪೋಸ್ಟ್ಗಳನ್ನು ಪ್ರಸಾರ ಮಾಡಲಾಗಿದ್ದು, ದೂರುದಾರರು ಕೇಂದ್ರ ಸಚಿವರ ವಿರುದ್ಧ ಆಧಾರರಹಿತ ಮತ್ತು ಆಕ್ಷೇಪಾರ್ಹ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯವು ಸಾರ್ವಜನಿಕ ಶಾಂತಿಯನ್ನು ಕದಡುವ ಮತ್ತು ನಾಗರಿಕರಲ್ಲಿ ಗೊಂದಲವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.