

ಮುಂಬೈ (ಮಹಾರಾಷ್ಟ್ರ): ಏಕನಾಥ್ ಶಿಂಧೆ ಜೊತೆ ಸೇರಿ ಆಪರೇಷನ್ ಟೈಗರ್ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ 6 ಲೋಕಸಭಾ ಸಂಸದರನ್ನು ತನ್ನತ್ತ ಸೆಳೆದಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇದೀಗ ಮಹಾ ರಾಜಕೀಯದಲ್ಲಿ ಮತ್ತೊಂದು ಆಪರೇಷನ್ಗೆ ಮುಂದಾಗಿದ್ದು, ಈ ಬಾರಿ ಅವರ ಟಾರ್ಗೆಟ್ NCP; ಅದ್ರೆ, ವಿಶೇಷವಾಗಿ ಈ ಬಾರಿ ಪಕ್ಷವನ್ನ ಇಬ್ಬಾಗ ಮಾಡುವ ಬದಲು ಇಡೀ ಪಕ್ಷವನ್ನೇ ತನ್ನತ್ತ ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ.
ಮಹಾರಾಷ್ಟ್ರದ ರಾಜಕೀಯ ತಡರಾತ್ರಿ ಪ್ರಮುಖ ಬೆಳವಣಿಗೆಗಳು ನಡೆದಿವೆ. ಹೌದು, ಶರದ್ ಪವಾರ್ ಬಣದ NCP ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮೊದಲು ಶರದ್ ಪವಾರ್ ಅವರನ್ನು ಭೇಟಿಯಾಗಿ, ತದನಂತರ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದರು. ಇದಾದ ಕೆಲವೇ ಕ್ಷಣದಲ್ಲಿ, ಆಡಳಿತಾರೂಢ ಎನ್ಸಿಪಿ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಕೂಡ ಫಡ್ನವೀಸ್ ಅವರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳ ನಂತರ ಮಹಾರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಸಮೀಕರಣವೊಂದು ರೂಪುಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಅದ್ರಲ್ಲೂ, ಶರದ್ ಪವಾರ್ ಬಣ ವಿರೋಧ ಪಕ್ಷದ INDIA ಒಕ್ಕೂಟವನ್ನು ತೊರೆದು ಎನ್ಡಿಎ ಕಡೆಗೆ ಸಾಗುತ್ತಿದೆಯೇ ಅಥವಾ ಇದು ಬೇರೆ ಚಟುವಟಿಕೆಯ ಎನ್ನುವುದರ ಕುರಿತು ಸ್ಪಷ್ಟನೆ ಸಿಗಬೇಕಿದೆ.
NDA ಸೇರಲು NCP(SP) ಶಾಸಕರ ಒತ್ತಡ?
ವರದಿಗಳ ಪ್ರಕಾರ, ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷದ 10 ಶಾಸಕರಲ್ಲಿ 9 ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿ ಅನುದಾನಕ್ಕಾಗಿ ಎನ್ಡಿಎ ಜೊತೆ ಕೈಜೋಡಿಸಲು ಒಲವು ತೋರಿದ್ದಾರೆ ಎನ್ನಲಾಗಿದೆ.
NDAಗೂ NCP(SP) ಯಾಕೆ ಬೇಕು?
NCP(SP) ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕೇವಲ 10 ಶಾಸಕರು ಮತ್ತು ಲೋಕಸಭೆಯಲ್ಲಿ 8 ಸಂಸದರನ್ನು ಹೊಂದಿದ್ದರೂ, ಸಂಸತ್ತಿನಲ್ಲಿ ಸಂಖ್ಯಾಬಲದ ಸಮತೋಲನದ ದೃಷ್ಟಿಯಿಂದ NCP(SP) ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಅದರಲ್ಲೂ, ಮೋದಿ ಸರ್ಕಾರದ ಬಹುನಿರೀಕ್ಷಿತ ಕ್ಷೇತ್ರ ಪುನರ್ ವಿಂಗಡಣೆಯಂತಹ ಪ್ರಮುಖ ಶಾಸನವನ್ನ ಮರುಮಂಡಿಸುವ ಮುಂಚಿತವಾಗಿ ಸಣ್ಣ ಪಕ್ಷಗಳ ಬೆಂಬಲವನ್ನು ಕ್ರೋಢೀಕರಿಸಲು ಬಿಜೆಪಿ ಬಯಸುತ್ತದೆ. ಹಾಗಾಗಿ, ಶರದ್ ಪವಾರ್ ಅವರನ್ನು NDA ತಕ್ಕೆಗೆ ಸೇರಿಸಲು ಉತ್ಸುಕವಾಗಿದೆ.
ಬಿಜೆಪಿ ಅಥವಾ ಕಾಂಗ್ರೆಸ್? ಶರದ್ ಪವಾರ್ ಚಿತ್ತ ಯಾರತ್ತ?
ಈ ಹಿಂದೆ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷವು ತನ್ನ ಅಸ್ತಿತ್ತ್ವಕಾಗಿ ಕಾಂಗ್ರೆಸ್ ಜೊತೆ ವಿಲೀನವಾಗುತ್ತದೆ ಎನ್ನುವ ಸುದ್ದಿ ಬಲವಾಗಿ ಹರಿದಾಡಿತ್ತು. ಆದ್ರೆ, ಇತ್ತೀಚಿನ NCP(SP) ಚಟುವಟಿಕೆಗಳನ್ನು ಗಮನಿಸಿದರೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಜೊತೆಗೆ ಸೇರಿ ತಮ್ಮ ಪಕ್ಷವನ್ನ ಮೂಲ ಅಂದ್ರೆ ಮಹಾರಾಷ್ಟ್ರ ಆಡಳಿತ ಭಾಗವಾಗಿರುವ ಎನ್ಸಿಪಿ ಜೊತೆ ಸೇರುವ ಮಾತು ಕೇಳಿಬರುತಿದೆ. ಹಾಗಾಗಿ, ಶರದ್ ಪವಾರ್ ಚಿತ್ತ ಯಾರತ್ತ ಎನ್ನುವುದೇ ಈಗ ಉದ್ಭವವಾಗಿರುವ ಪ್ರಶ್ನೆ?