

ಹೈದರಾಬಾದ್: 2ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರೊಬ್ಬರು ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಹೋಮ್ವರ್ಕ್ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಹೈದರಾಬಾದ್ನ ಸೈದಾಬಾದ್ನಲ್ಲಿರುವ ಶಾಲೆಯೊಂದರ ಆಡಳಿತ ಮಂಡಳಿ ವಿರುದ್ಧ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಇದು 'ಹಿಂದೂ ಸಂಸ್ಕೃತಿ ಮೇಲಿನ ಬಲವಂತದ ದಾಳಿ' ಎಂದು ಬಣ್ಣಿಸಿದ್ದಾರೆ.
ತಮ್ಮ ಕಚೇರಿ ಮೂಲಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 'ಅವರು ಅಹಂಕಾರಿಗಳಾಗಿದ್ದಾರೆ ಮತ್ತು ಹಿಂದೂ ಸಂಸ್ಕೃತಿಯ ಮೇಲೆ ಬಲವಂತವಾಗಿ ದಾಳಿ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು 'ಕಲ್ಮಾ' ಮತ್ತು 'ಸೂರಾ ಫಾತಿಹಾ'ವನ್ನು ಪಠಿಸುವಂತೆ ಆದೇಶ ಹೊರಡಿಸಿರುವುದು ಸ್ವೀಕಾರಾರ್ಹವಲ್ಲ. ಸ್ವಯಂಘೋಷಿತ ಜಾತ್ಯತೀತ ಸಂಘಟನೆಗಳು ಏಕೆ ಮೌನವಾಗಿವೆ? ಇಡೀ ಹಿಂದೂ ಸಮುದಾಯವು ಇದನ್ನು ಬಲವಾಗಿ ಖಂಡಿಸಬೇಕು' ಎಂದು ಹೇಳಿದರು.
'ಶಾಲಾ ಆಡಳಿತ ಮಂಡಳಿ ವಿರುದ್ಧ ತಕ್ಷಣದ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಅವರು, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. 'ಈ ವಿಷಯವನ್ನು ನಿರ್ಲಕ್ಷಿಸಿದರೆ, ಇಂತಹ ಘಟನೆಗಳು ತೆಲಂಗಾಣದಾದ್ಯಂತ ಹರಡುವ ಅಪಾಯವಿದೆ' ಎಂದು ಅವರು ಹೇಳಿದರು.
ಸ್ಥಳೀಯ ಆಡಳಿತ ಮತ್ತು ಪೊಲೀಸರ ಕಾರ್ಯವೈಖರಿಯಲ್ಲಿ ದ್ವಂಧ್ವ ಧೋರಣೆ ಇದೆ. ತಮ್ಮ ವಾಹನದ ಮೇಲೆ ಬರೆದಿದ್ದ ಸಂದೇಶವೊಂದರ ಕಾರಣಕ್ಕಾಗಿ ಪೊಲೀಸರು ಮತ್ತು ಮಜ್ಲಿಸ್ (ಎಐಎಂಐಎಂ) ನಾಯಕರಿಂದ ಕಿರುಕುಳಕ್ಕೊಳಗಾದರು ಎಂದು ಹೇಳಲಾದ ಭರತ್ ಎಂಬ ಆಟೋ ಚಾಲಕನ ಪ್ರಕರಣವನ್ನು ಅವರು ಉಲ್ಲೇಖಿಸಿದರು.
'ಆಟೋ ಚಾಲಕ ಭರತ್ಗೆ ಕಿರುಕುಳ ನೀಡಿದ್ದಾರೆನ್ನಲಾದ ಪೊಲೀಸರು ಮತ್ತು ಮಜ್ಲಿಸ್ ನಾಯಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಭರತ್ ಬರೆದಿದ್ದರಲ್ಲಿ ತಪ್ಪೇನಿತ್ತು? ಹಿಂದೂಗಳಿಗೆ ಅವಮಾನವಾಗುವಂತಹ ಸಂದೇಶಗಳನ್ನು ಆಟೋಗಳು ಮತ್ತು ಗೋಡೆಗಳ ಮೇಲೆ ಉರ್ದು ಭಾಷೆಯಲ್ಲಿ ಬರೆಯುವವರ ವಿರುದ್ಧ ಏಕೆ ಪ್ರಕರಣಗಳನ್ನು ದಾಖಲಿಸಲಾಗುತ್ತಿಲ್ಲ? ಅವರಿಗೆ ಒಂದು ನಿಯಮ ಮತ್ತು ಭರತ್ಗೆ ಮತ್ತೊಂದು ನಿಯಮವೇ?' ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬಿಜೆಪಿ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಕೇಂದ್ರ ಸಚಿವರು, ಪಕ್ಷವು ಅಧಿಕಾರಕ್ಕೆ ಬಂದರೆ ಸಾಂಪ್ರದಾಯಿಕ ಮೌಲ್ಯಗಳ ರಕ್ಷಣೆಗೆ ಆದ್ಯತೆ ನೀಡಲಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಎಲ್ಲ ಹಿಂದೂ ವಿದ್ಯಾರ್ಥಿಗಳು ತಿಲಕ ಧರಿಸುವುದನ್ನು ನಾವು ಕಡ್ಡಾಯಗೊಳಿಸುತ್ತೇವೆ. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ನಾವು ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.
ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯ ನಂತರ, ವಿವಾದಕ್ಕೆ ಕಾರಣವಾದ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿಯು ಈಗಾಗಲೇ ಸೇವೆಯಿಂದ ವಜಾಗೊಳಿಸಿ ಕಪ್ಪುಪಟ್ಟಿಗೆ ಸೇರಿಸಿದೆ. ಸಯೀದಾಬಾದ್ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ ಈ ಹೇಳಿಕೆಗಳು ಹೊರಬಂದಿವೆ.