

ನವದೆಹಲಿ: ಹವಾಮಾನ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್, ಜುಲೈ 20ರಂದು ನಡೆಯಲಿರುವ 'ಸಂಸತ್ ಚಲೋ' ಪ್ರತಿಭಟನೆಯನ್ನು ಭಾರತದ "ಎರಡನೇ ಸ್ವಾತಂತ್ರ್ಯ ಹೋರಾಟ" ಎಂದು ಬಣ್ಣಿಸಿದ್ದು, ಈ ಹೋರಾಟವನ್ನು ಯಶಸ್ಸುಗೊಳಿಸುವಂತೆ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಸಫ್ದರ್ಜಂಗ್ ಆಸ್ಪತ್ರೆಯಿಂದ ತಮ್ಮ ಪತ್ನಿ ಗೀತಾಂಜಲಿ ಜೆ. ಅಂಗ್ಮೋ ಅವರ ಮೂಲಕ ಕೈಬರಹದ ಸಂದೇಶವನ್ನು ರವಾನಿಸಿರುವ ವಾಂಗ್ಚುಕ್ ಅವರು, "ಭಯದಿಂದ ಸ್ವಾತಂತ್ರ್ಯ" ಹಾಗೂ "ಅನ್ಯಾಯದಿಂದ ಸ್ವಾತಂತ್ರ್ಯ" ಪಡೆಯುವ ಹೋರಾಟ ಇದು ಎಂದು ಹೇಳಿದ್ದಾರೆ.
ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಳ್ಳಲಾದ ಸಂದೇಶದಲ್ಲಿ, "ಜುಲೈ 20 – ಭಾರತದ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯಲಿದೆ. ಅನ್ಯಾಯದಿಂದ ಸ್ವಾತಂತ್ರ್ಯ (ಪ್ರಶ್ನೆಪತ್ರ ಸೋರಿಕೆಯಂತಹ ಪ್ರಕರಣಗಳಿಂದ). ಭಯದಿಂದ ಸ್ವಾತಂತ್ರ್ಯ (ನನ್ನ ಅಕ್ರಮ ಬಂಧನದಿಂದ)" ಎಂದು ಅವರು ಬರೆದಿದ್ದಾರೆ.
ಮುಂದುವರಿದು, "ಸಂಸತ್ತಿನತ್ತ ಮೆರವಣಿಗೆ ನಡೆಯಲಿದೆ. ದಯವಿಟ್ಟು ಇದನ್ನು ಭಾರಿ ಯಶಸ್ಸಾಗಿಸಿ" ಎಂದು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಸಂದೇಶದ ಕೊನೆಯಲ್ಲಿ, "ಸಫ್ದರ್ಜಂಗ್ ಆಸ್ಪತ್ರೆಯಲ್ಲಿನ ನನ್ನ ಅಕ್ರಮ ಬಂಧನದಿಂದ ಗೀತಾಂಜಲಿ ಮೂಲಕ ಈ ಪತ್ರ ಕಳುಹಿಸಲಾಗಿದೆ" ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಮೂಲಕ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ತಮ್ಮ ಇಚ್ಛೆಗೆ ವಿರುದ್ಧವಾಗಿ ಇರಿಸಲಾಗಿದೆ ಎಂಬ ಆರೋಪವನ್ನು ವಾಂಗ್ಚುಕ್ ಮತ್ತೊಮ್ಮೆ ಈ ಸಂದೇಶದ ಮೂಲಕ ಪುನರುಚ್ಚರಿಸಿದ್ದಾರೆ.
ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳದಿಂದ ತಮ್ಮನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿಜೆಪಿ (Cockroach Janata Party) ನೇತೃತ್ವದಲ್ಲಿ ಜುಲೈ 20ರಂದು ಸಂಸತ್ ಚಲೋ ಪ್ರತಿಭಟನೆ ಆಯೋಜಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಜವಾಬ್ದಾರಿಯನ್ನು ನಿಗದಿಪಡಿಸುವುದು, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸುವುದು ಪ್ರತಿಭಟನೆಯ ಪ್ರಮುಖ ಬೇಡಿಕೆಗಳಾಗಿವೆ.
ಜೂನ್ 28ರಿಂದ ಸಿಜೆಪಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಉಪವಾಸ ದೀರ್ಘಗೊಂಡ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಜಂತರ್ ಮಂತರ್ನಿಂದ ಬಲವಂತವಾಗಿ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.