

ನವದೆಹಲಿ: ಕಳೆದ 36 ದಿನಗಳಿಂದ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿದ್ದ ಪ್ರತಿಭಟನೆ ಶನಿವಾರ ಅಂತ್ಯವಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳ ಜೊತೆಗೆ ಸಿಜೆಪಿ ಪ್ರತಿಭಟನೆ ನಡೆಸಿದ್ದು, ಇದೀಗ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಪ್ರತಿಭಟನೆಯನ್ನು ಅಂತ್ಯ ಮಾಡಲಾಗಿದೆ.
ಪ್ರತಿಭಟನೆ ಅಂತ್ಯವಾದ ಬಳಿಕ ಮಾತನಾಡಿದ ಸಿಜೆಪಿ ವಕ್ತಾರ ಸೌರವ್ ದಾಸ್, ಯುವಜನರ ಸಮಸ್ಯೆ ಬಗ್ಗೆ ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಮುಸ್ಲಿಂ, ಕ್ರೈಸ್ತ-ವಿರೋಧಿ ರಾಜಕೀಯದ ಆಡಳಿತ ನಿಲ್ಲಿಸಿ: ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಿದೆ. ಪ್ರಜಾಪ್ರಭುತ್ವವು ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಬಯಸುತ್ತದೆ. ದೇಶದ ಯುವಜನರೇ ಭವಿಷ್ಯ. ಅವರು ಅದನ್ನು ಮರುಸ್ಥಾಪಿಸಲು ಶಕ್ತರಾಗಿದ್ದಾರೆ. ಇದೊಂದು ದೊಡ್ಡ ಗೆಲುವು. ದೇಶದ ಯುವಜನರು ಈ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ಆದಾಗ್ಯೂ, ಮುಸ್ಲಿಂ-ವಿರೋಧಿ ಮತ್ತು ಕ್ರೈಸ್ತ-ವಿರೋಧಿ ರಾಜಕೀಯ ಮಾಡುವ ಮೂಲಕ ನೀವು ಆಡಳಿತ ನಡೆಸುವ ರೀತಿಯನ್ನು ದಯವಿಟ್ಟು ನಿಲ್ಲಿಸಿ. ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಂದು ಸಮುದಾಯದ ಕಲ್ಯಾಣಕ್ಕಾಗಿ ದಯವಿಟ್ಟು ಕೆಲಸ ಮಾಡಿ; ಆಗ ಮಾತ್ರ ನಿಮಗೆ ಜನರ ವಿಶ್ವಾಸ ಸಿಗುತ್ತದೆ ಎಂದರು.
"ಇದು ಕೇವಲ ಟ್ರೈಲರ್ ಅಷ್ಟೇ. ಅಸಲಿ ಪಿಕ್ಟರ್ ಇನ್ನೂ ಬಾಕಿಯಿದೆ. ದೇಶದ ಯುವಜನರು ಜಾಗೃತಗೊಂಡಿದ್ದಾರೆ. ದೇಶದ ಯುವಜನರೇ ಈ ದೇಶದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಒಂದು ಪಕ್ಷವಾಗಿ ಮತ್ತು ಒಂದು ಚಳುವಳಿಯಾಗಿ, ಇದು ಖಂಡಿತವಾಗಿಯೂ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಈಗ ನಾವು ದೇಶಾದ್ಯಂತ ಸಂಚರಿಸಿ, ಯುವಜನರ ಮಾತುಗಳನ್ನು ಆಲಿಸಿ, ಅವರಿಗಾಗಿ ಉತ್ತಮ ನೀತಿಗಳನ್ನು ರೂಪಿಸಿ, ಎಲ್ಲರಿಂದಲೂ ಹೊಣೆಗಾರಿಕೆಯನ್ನು ಒತ್ತಾಯಿಸುವುದನ್ನು ಮುಂದುವರಿಸುತ್ತೇವೆ. ಇದು ಕೇವಲ ಆರಂಭವಷ್ಟೇ. ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡಬೇಕಿದೆ ಎಂದು ಅವರು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆಯತ್ತ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದ ಅವರು, ವ್ಯವಸ್ಥೆಯಲ್ಲಿ ಸುಧಾರಣೆ ಕಾಣದಿದ್ದರೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ಬರುತ್ತಾರೆ ಎಂದು ಎಚ್ಚರಿಸಿದರು.
CJP ವಕ್ತಾರ ಅಶುತೋಷ್ ರಂಕಾ ಮಾತನಾಡಿ CJPಯು ಭಾರತದಾದ್ಯಂತ ಯುವಜನರ ಸಮಸ್ಯೆಗಳನ್ನು ಎತ್ತುತ್ತಲೇ ಇರುತ್ತದೆ ಎಂದರು. ದೇಶದ ಯುವಜನತೆ ಜಾಗೃತಗೊಂಡು ರಾಷ್ಟ್ರವನ್ನು ಮರಳಿ ಪಡೆದಿದ್ದಾರೆ. ಯುವಕರು ತಮ್ಮ ಹಕ್ಕುಗಳಿಗಾಗಿ 37 ದಿನ ಹೋರಾಟ ನಡೆಸಿದ್ದಾರೆ. ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ. ಹಾಗೆಯೇ ತಮ್ಮ ಆಪ್ತರನ್ನು ಕಳೆದುಕೊಂಡ ಕುಟುಂಬಗಳ ಬಗ್ಗೆಯೂ ನಾವು ಚಿಂತಿಸುತ್ತಿದ್ದೇವೆ ಎಂದು ತಿಳಿಸಿದರು.