ಆಪರೇಷನ್ ಸಿಂದೂರ್ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ; PoK ಬಗ್ಗೆ ಮಾತ್ರ ಮಾತುಕತೆ: ಕಾರ್ಗಿಲ್ ವಿಜಯ್ ದಿವಸ್‌ನಲ್ಲಿ ರಾಜನಾಥ್ ಸಿಂಗ್-Video

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಹೊರತುಪಡಿಸಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಪುನರುಚ್ಚರಿಸಿದರು. ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಅವರು ಹೇಳಿದರು.
Rajanath Singh
ರಕ್ಷಣಾ ಸಚಿವ ರಾಜನಾಥ್ ಸಿಂಗ್
Updated on

ದ್ರಾಸ್ (ಲಡಾಖ್): 'ಆಪರೇಷನ್ ಸಿಂದೂರ್' ಉಗ್ರರು ಮತ್ತು ಅವರಿಗೆ ಬೆಂಬಲ ನೀಡುವವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಾಕಿಸ್ತಾನದಿಂದ ಯಾವುದೇ ಪ್ರಚೋದನೆ ಎದುರಾದರೂ ಅದಕ್ಕೆ ಅವರ ಊಹೆಗೂ ಮೀರಿದ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ಪ್ರತಿಪಾದಿಸಿದರು.

ಕಾರ್ಗಿಲ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ನಡೆದ 27ನೇ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಹೊರತುಪಡಿಸಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಪುನರುಚ್ಚರಿಸಿದರು. ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದ್ದು, ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ಅವರು ಹೇಳಿದರು.

2025ರ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಮೇ 2025ರಲ್ಲಿ ಕೈಗೊಳ್ಳಲಾದ ಆಪರೇಷನ್ ಸಿಂದೂರ್ ನ್ನು ಸ್ಮರಿಸಿದ ರಾಜನಾಥ್ ಸಿಂಗ್, ಈ ಕಾರ್ಯಾಚರಣೆ ಉಗ್ರವಾದದ ವಿರುದ್ಧ ಭಾರತದ ದೃಢ ಸಂಕಲ್ಪವನ್ನು ಪ್ರತಿಬಿಂಬಿಸಿದೆ ಎಂದರು.

ಭಯೋತ್ಪಾದನೆಯ ಮೂಲಕ ಭಾರತಕ್ಕೆ ಬೆದರಿಕೆ ಒಡ್ಡಲು ಯತ್ನಿಸುವವರ ಗತಿ ಏನಾಗಲಿದೆ ಎಂಬುದನ್ನು ಆಪರೇಷನ್ ಸಿಂದೂರ್ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು.

ಪಾಕಿಸ್ತಾನದಿಂದ ಯಾವುದೇ ದುಸ್ಸಾಹಸ ನಡೆದರೂ, ಅದಕ್ಕೆ ಅವರ ಕಲ್ಪನೆಗೂ ಮೀರಿದ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯ ಭಾರತ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗಿದೆ ಎಂದು ಅವರು ಹೇಳಿದರು.

ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಯ ವಿರುದ್ಧದ ಯಾವುದೇ ದುಷ್ಟ ಹೆಜ್ಜೆಗೆ ಇದೇ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂದು ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದರು.

ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿಯ ಭಾಗವನ್ನಾಗಿಸಿಕೊಂಡಿದೆ ಎಂದು ಆರೋಪಿಸಿದ ಅವರು, ಉಭಯ ದೇಶಗಳ ನಡುವಿನ ಮಾತುಕತೆ ಕುರಿತು ಭಾರತದ ನಿಲುವು ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವಿಚಾರವನ್ನು ಹೊರತುಪಡಿಸಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.

ಆಪರೇಷನ್ ವಿಜಯ್-ಕಾರ್ಗಿಲ್ ವಿಜಯ್ ದಿವಸ

ಭಾರತ ಹಡಗುಗಳ ವಿನ್ಯಾಸದಲ್ಲಿ ತೊಡಗಿಸಿಕೊಂಡಿರುವಾಗ, ಪಾಕಿಸ್ತಾನ ಭಯೋತ್ಪಾದನೆಯ ವಿನ್ಯಾಸದಲ್ಲಿ ನಿರತವಾಗಿದೆ. ನಾವು ಹೊಸ ಆವಿಷ್ಕಾರಗಳ ಮಾರ್ಗ ಹುಡುಕುತ್ತಿದ್ದರೆ, ಪಾಕಿಸ್ತಾನ ಹೊಸದಾಗಿ ನುಸುಳುವ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಟೀಕಿಸಿದರು.

1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರಿಗೆ ಗೌರವ ನಮನ ಸಲ್ಲಿಸಿದ ರಾಜನಾಥ್ ಸಿಂಗ್, ಭಾರತದ ವಿಜಯವನ್ನು ಭಾರತ ಮಾತೆಯ ಕಿರೀಟದಲ್ಲಿ ಮಿನುಗುತ್ತಿರುವ ವಜ್ರ ಎಂದು ಬಣ್ಣಿಸಿದರು.

ಕಾರ್ಗಿಲ್ ವಿಜಯ್ ದಿವಸ್ ನ್ನು ಪ್ರತಿವರ್ಷ ಜುಲೈ 26ರಂದು ಆಚರಿಸಲಾಗುತ್ತದೆ. 1999ರಲ್ಲಿ ಪಾಕಿಸ್ತಾನದ ನುಸುಳುಕೋರರಿಂದ ಆಕ್ರಮಿಸಲ್ಪಟ್ಟ ಕಾರ್ಗಿಲ್ ಪ್ರದೇಶದ ಪ್ರಮುಖ ಶಿಖರಗಳನ್ನು ಮರುಸ್ವಾಧೀನಪಡಿಸಿಕೊಳ್ಳಲು ಭಾರತ ನಡೆಸಿದ ಆಪರೇಷನ್ ವಿಜಯ್ ಯಶಸ್ವಿಯಾಗಿ ಪೂರ್ಣಗೊಂಡ ದಿನದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com