

ನವದೆಹಲಿ: ಯಾವುದೇ ಕಾರಣಕ್ಕೂ ನಾನು ಪ್ರಧಾನ್ ಅವರ ರಾಜೀನಾಮೆ ಕುರಿತ ಪೋಸ್ಟ್ ಡಿಲೀಟ್ ಮಾಡುವುದಿಲ್ಲ ಎಂದು ಒಡಿಶಾದ ಭುವನೇಶ್ವರ ಕ್ಷೇತ್ರದ ಬಿಜೆಪಿ ಸಂಸದೆ, ಮಾಜಿ ಐಎಎಸ್ ಅಧಿಕಾರಿ ಅಪರಾಜಿತಾ ಸಾರಂಗಿ ಅವರ ಪುತ್ರಿ ಅರ್ಚಿತಾ ಸಾರಂಗಿ ಹೇಳಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿತ್ತು. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಧಾನ್ ಅವರ ರಾಜೀನಾಮೆಗೆ ಸಂಬಂಧಿಸಿದ ಸುದ್ದಿಯೊಂದನ್ನು ಅರ್ಚಿತಾ ಸಾರಂಗಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.
ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ಅದನ್ನು ತೆಗೆದುಹಾಕುವಂತೆ (ಡಿಲೀಟ್ ಮಾಡಲು) ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಅರ್ಚಿತಾ ಆರೋಪಿಸಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮತ್ತೊಂದು ಪೋಸ್ಟ್ ಹಾಕಿದ ಅವರು, "ಧರ್ಮೇಂದ್ರ ಪ್ರಧಾನ್ ಅವರ ಪಿಎ ಅವರಿಗೆ ನನ್ನದೊಂದು ಮಾತು. ಈ ಪೋಸ್ಟ್ ಡಿಲೀಟ್ ಮಾಡಿಸುವಂತೆ ನೀವು ಖಂಡಿತವಾಗಿಯೂ ನನ್ನ ತಾಯಿಗೆ ಮೆಸೇಜ್ ಮಾಡುತ್ತೀರ ಎಂಬುದು ನನಗೆ ಗೊತ್ತು (ಹಿಂದೆಯೂ ಹೀಗೆಯೇ ಆಗಿದೆ). ಆದರೆ ಈ ಬಾರಿ ಆ ಶ್ರಮ ವಹಿಸಬೇಡಿ, ನಾನು ಇದನ್ನು ಡಿಲೀಟ್ ಮಾಡುವುದಿಲ್ಲ. ಜೈ ಜಗನ್ನಾಥ್! ಜೈ ಹಿಂದ್!" ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಅರ್ಚಿತಾ ಸಾರಂಗಿ ಅವರ ಇನ್ಸ್ಟಾಗ್ರಾಂ ಖಾತೆಯು ನಿಷ್ಕ್ರಿಯವಾಗಿದೆ.
ಒಂದೆಡೆ ಮಗಳು ಸಚಿವರ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರೆ, ಇನ್ನೊಂದೆಡೆ ಸಂಸದೆ ಅಪರಾಜಿತಾ ಸಾರಂಗಿ ಅವರು ಧರ್ಮೇಂದ್ರ ಪ್ರಧಾನ್ ಅವರ ಪರವಾಗಿ ನಿಂತಿದ್ದಾರೆ. ನೀಟ್ ಅಕ್ರಮದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಮೂಲಕ ಧರ್ಮೇಂದ್ರ ಪ್ರಧಾನ್ ಅವರು ದೊಡ್ಡ ಮಟ್ಟದ ಧೈರ್ಯ ಮತ್ತು ನೈತಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ಅಪರಾಜಿತಾ ಬೆಂಬಲ ಸೂಚಿಸಿದ್ದಾರೆ.
ಅಪರಾಜಿತಾ ಸಾರಂಗಿ ರಾಜಕೀಯಕ್ಕೆ ಸೇರುವ ಮೊದಲು IAS ಅಧಿಕಾರಿಯಾಗಿದ್ದರು. ಅವರು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಭುವನೇಶ್ವರದಿಂದ ತಮ್ಮ ಬಿಜೆಡಿ ಪ್ರತಿಸ್ಪರ್ಧಿಯನ್ನು 35,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಗೆದ್ದರು.
ಒಡಿಶಾದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿರುವ ಪ್ರಧಾನ್, ಕಾಕ್ರೋಚ್ ಜನತಾ ಪಕ್ಷ ಮತ್ತು ಕೇಂದ್ರದ ನಡುವಿನ ಮೂರನೇ ಸುತ್ತಿನ ಮಾತುಕತೆಗೆ ಕೆಲವೇ ಗಂಟೆಗಳ ಮೊದಲು ರಾಜೀನಾಮೆ ನೀಡಿದರು.