

ನವದೆಹಲಿ: ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ)ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನಡುವಿನ ಸ್ವಾರಸ್ಯಕರ ಮಾತುಕತೆ ಈಗ ಬಹಿರಂಗವಾಗಿದೆ.
ಹೌದು, ಸಿಜೆಪಿ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪರ ಧ್ವನಿ ಎತ್ತುವ ಮೂಲಕ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ದಿನಗೂಲಿ ಕಾರ್ಮಿಕ ಮೊಹಮ್ಮದ್ ಇರ್ಫಾನ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನಡುವಿನ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.
ಇಂಡಿಯಾ ಟುಡೇ ಡಿಜಿಟಲ್, 'ದಿ ಲಾಲಂಟಾಪ್' ಮಾಧ್ಯಮಕ್ಕೆ ಮೊಹಮ್ಮದ್ ಇರ್ಫಾನ್ ನೀಡಿದ ಸಂದರ್ಶನದಲ್ಲಿ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ದೆಹಲಿಯ ಸಾವ್ಡಾ ಜೆಜೆ ಕಾಲೋನಿಯಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡುವ ಮೊದಲು ಪ್ರಿಯಾಂಕಾ ಗಾಂಧಿ ತನಗೆ ಕರೆ ಮಾಡಿದ್ದರು ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಜೊತೆಗಿನ ಸಂಭಾಷಣೆಯನ್ನು ನೆನಪಿಸಿಕೊಂಡ ಕಾರ್ಮಿಕ, ತಮ್ಮ ಸಹೋದರ ರಾಹುಲ್ ಗಾಂಧಿಗೆ ಮದುವೆಯಾಗುವಂತೆ ಮನವೊಲಿಸು ಎಂದು ತಮಾಷೆಯಾಗಿ ಪ್ರಿಯಾಂಕಾ ಗಾಂಧಿ ಕೇಳಿಕೊಂಡರು ಎಂದು ಇರ್ಫಾನ್ ಹೇಳಿದ್ದಾರೆ. ಅಲ್ಲದೆ ತಮ್ಮ ಸಹೋದರ ತನ್ನ ಮಾತನ್ನು ಕೇಳುವುದಿಲ್ಲ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ನನ್ನ ಸಹೋದರ ರಾಹುಲ್ ಗಾಂಧಿ ನನ್ನ ಮಾತನ್ನಂತೂ ಕೇಳುವುದಿಲ್ಲ, ನೀವಾದರೂ ಅವರಿಗೆ ಮದುವೆಯಾಗುವಂತೆ ಒಪ್ಪಿಸಿ ಎಂದು ತಮಾಷೆಯಾಗಿ ಇರ್ಫಾನ್ ಅವರಲ್ಲಿ ಕೋರಿದ್ದಾರೆ. ಅದಕ್ಕೆ ಪ್ರತಿಯಾಗಿ ಇರ್ಫಾನ್, ರಾಹುಲ್ ಗಾಂಧಿ ಅವರು ಈಗಲೇ ಮದುವೆಯಾಗುವುದು ಬೇಡ ಎಂಬುದೇ ನನ್ನ ಭಾವನೆ ಎಂದು ಹಾಸ್ಯದ ಧಾಟಿಯಲ್ಲೇ ಉತ್ತರಿಸಿರುವುದಾಗಿ ಸಂದರ್ಶನದಲ್ಲಿ ಇರ್ಫಾನ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ಅವರ ಸಂದರ್ಶನ ವೈರಲ್ ಆದ ಬೆನ್ನಲ್ಲೇ, ರಾಹುಲ್ ಗಾಂಧಿ ಅವರು ಇರ್ಫಾನ್ ಅವರ ನಿವಾಸಕ್ಕೆ ಖುದ್ದಾಗಿ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ.