

ಕಾಕಿನಾಡ: ಎಲ್ಲಾ ಅಡೆತಡೆಗಳನ್ನು ಮೀರಿ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ವಿಶೇಷಚೇತನ ಟೇಲರೊಬ್ಬರ ಪುತ್ರ ಅಖಿಲೇಶ್ ಮಾಲ್ತಿ ಅವರು ಕೆನಡಾ ಮೂಲದ ಕಂಪನಿಯಲ್ಲಿ ಬರೋಬ್ಬರಿ 1.06 ಕೋಟಿ ರೂ. ವಾರ್ಷಿಕ ಪ್ಯಾಕೇಜ್ನೊಂದಿಗೆ ಕೃತಕ ಬುದ್ಧಿಮತ್ತೆ(AI) ಎಂಜಿನಿಯರ್ ಉದ್ಯೋಗ ಪಡೆದಿದ್ದಾರೆ.
ಪಿಠಾಪುರಂ ಕ್ಷೇತ್ರದ ಕೊಥಪಲ್ಲಿ ಮಂಡಲದ ಕುತ್ತುಕುಡಿಮಿಲ್ಲಿ ಗ್ರಾಮದ ಅತ್ಯಂತ ಬಡ ಕುಟುಂಬದ ವಿದ್ಯಾರ್ಥಿಯಾಗಿರುವ ಅಖಿಲೇಶ್, ಇತ್ತೀಚಿನ ಕ್ಯಾಂಪಸ್ ಪ್ಲೇಸ್ಮೆಂಟ್ ಡ್ರೈವ್ನಲ್ಲಿ ಆಯ್ಕೆಯಾಗಿದ್ದು, 1 ಕೋಟಿ ರೂ. ಉದ್ಯೋಗದ ಆಫರ್ ಪಡೆದಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಸುರಂಪಲೆಮ್ನ ಆದಿತ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ AI ಎಂಜಿನಿಯರ್ ಆಗಿ ಅಖಿಲೇಶ್ ಉದ್ಯೋಗ ಪಡೆದಿದ್ದಾರೆ. ಕೆನಡಾ ಕಂಪನಿಯಾದ ಫ್ಯಾಬ್ರಾಂಟಿಕ್ AI ಜೂನ್ 20 ರಂದು ಯುವಕನಿಗೆ ₹1.06 ಕೋಟಿ ವಾರ್ಷಿಕ ಪ್ಯಾಕೇಜ್ನ ಆಫರ್ ಲೆಟರ್ ಕಳುಹಿಸಿದೆ.
ಅಖಿಲೇಶ್ ಈಗಾಗಲೇ ಮನೆಯಿಂದಲೇ ಕೆಲಸ ಆರಂಭಿಸಿದ್ದು, ಮೊದಲು ಮೂರರಿಂದ ಆರು ತಿಂಗಳವರೆಗೆ ₹30,000 ಸ್ಟೈಫಂಡ್ ಸಿಗಲಿದೆ. ಬಳಿಕ ಪೂರ್ಣ ಪ್ಯಾಕೇಜ್ ಪಡೆಯಲಿದ್ದಾರೆ.
ಈ ಬಗ್ಗೆ ಸ್ಥಳೀಯ ಭಾಷೆಯ ಚಾನೆಲ್ಗೆ ಮಾತನಾದಿ ಅಖಿಲೇಶ್, ಇದು ಪೂರ್ಣ ಸಮಯದ ಮನೆಯಿಂದ ಕೆಲಸ ಮಾಡುವ ಹುದ್ದೆ ಎಂದು ಹೇಳಿದ್ದಾರೆ.
ಅಖಿಲೇಶ್ ಸಾಮಾನ್ಯ ಕುಟುಂಬದ ಗಂಗಾಧರ್ ಮತ್ತು ದೇವಿ ದಂಪತಿಯ ಮಗ. ಶ್ರವಣದೋಷವುಳ್ಳ ಗಂಗಾಧರ್ ಯಾವುದೇ ಶಿಕ್ಷಣ ಪಡೆಯಲಿಲ್ಲ ಮತ್ತು ಟೇಲರ್ ಆಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ತಮ್ಮ ಮಗ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕೆಂಬ ಕನಸು ಕಂಡಿದ್ದರು. ಅಂತೆಯೇ ಕಷ್ಟದಲ್ಲೂ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಇದನ್ನು ಅರಿತ ಅಖಿಲೇಶ್, ಹೆತ್ತವರ ಕನಸು ನನಸಾಗಿಸಲು ದೃಢನಿಶ್ಚಯ ಮಾಡಿ ಚಿಕ್ಕ ವಯಸ್ಸಿನಿಂದಲೇ ಶ್ರದ್ಧೆಯಿಂದ ಅಧ್ಯಯನ ಮಾಡುತ್ತಿದ್ದರು.