ಸೈಬರ್ ಸೆಕ್ಯುರಿಟಿ ಕೋರ್ಸ್ ಗೆ ಸಿಗದ ಪ್ರವೇಶ; ವಿದ್ಯಾರ್ಥಿಯಿಂದ ಐಐಟಿ ವೆಬ್ ಸೈಟ್ ಹ್ಯಾಕ್, ಶಿಕ್ಷೆಯ ಬದಲು ಅಚ್ಚರಿಯ ಕ್ರಮ!

ಅಚ್ಚರಿಯೆಂದರೆ ಐಐಟಿ-ಕೆ ಮತ್ತು ಐಐಟಿ ಮದ್ರಾಸ್ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಆತನ ಕೌಶಲ್ಯಗಳನ್ನು ಪರಿಗಣಿಸಿ ಸಂಸ್ಥೆಗೆ ಸೇರಲು ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳಿವೆ.
IIT website hacked
ಐಐಟಿ ವೆಬ್ ಸೈಟ್ ಹ್ಯಾಕ್online desk
Updated on

ನವದೆಹಲಿ: ಐಐಟಿ-ಕಾನ್ಪುರ ಹೊಸದಾಗಿ ಪ್ರಾರಂಭಿಸಿರುವ ಬ್ಯಾಚುಲರ್ ಆಫ್ ಸೈಬರ್ ಸೆಕ್ಯುರಿಟಿ ಕೋರ್ಸ್ ಗೆ ಪ್ರವೇಶ ನಿರಾಕರಿಸಿದ ನಂತರ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಕೆ) ಮತ್ತು ಐಐಟಿ ಮದ್ರಾಸ್‌ನ ವೆಬ್‌ಸೈಟ್‌ಗಳನ್ನು ವಿದ್ಯಾರ್ಥಿಯೋರ್ವ ಹ್ಯಾಕ್ ಮಾಡಿ ಸುದ್ದಿಯಾಗಿದ್ದಾನೆ.

ಅಚ್ಚರಿಯೆಂದರೆ ಐಐಟಿ-ಕೆ ಮತ್ತು ಐಐಟಿ ಮದ್ರಾಸ್ ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಆತನ ಕೌಶಲ್ಯಗಳನ್ನು ಪರಿಗಣಿಸಿ ಸಂಸ್ಥೆಗೆ ಸೇರಲು ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳಿವೆ.

ವಿದ್ಯಾರ್ಥಿಯು ಐಐಟಿ-ಕೆ ವೆಬ್‌ಸೈಟ್‌ನಲ್ಲಿ "ಸೈಟ್ ಹ್ಯಾಕ್ ಆಗಿದೆ. ನನಗೆ ಬೇಕಾಗಿರುವುದು ಕೇವಲ ಒಂದು ನ್ಯಾಯಯುತ ಅವಕಾಶ" ಎಂದು ಸಂದೇಶವನ್ನು ಬರೆದಿದ್ದಾನೆ.

ಪದವಿಪೂರ್ವ ಸೈಬರ್ ಸೆಕ್ಯುರಿಟಿ ಕೋರ್ಸ್ ನಿಂದ ತಿರಸ್ಕರಿಸಲ್ಪಟ್ಟ ನಂತರ ತಾನು ಐಐಟಿ-ಕೆ ಮತ್ತು ಐಐಟಿ ಮದ್ರಾಸ್‌ನ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದೇನೆ ಎಂದು ವಿದ್ಯಾರ್ಥಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ನಂತರ ಅವರು ಎಕ್ಸ್ ಮತ್ತು ರೆಡ್ಡಿಟ್‌ನಲ್ಲಿ ವೆಬ್ ಸೈಟ್ ನ್ನು ಹ್ಯಾಕ್ ಮಾಡಿ ಅತಿಕ್ರಮಿಸಲಾಗಿರುವ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡರು. ನನ್ನ ಉದ್ದೇಶ ವೆಬ್ ಸೈಟ್ ಗೆ ಹಾನಿ ಮಾಡುವುದು ಅಲ್ಲ, ಆದರೆ ಸಾಮರ್ಥ್ಯಗಳನ್ನು ಪ್ರದರ್ಶಿಸುವುದಾಗಿದೆ ಎಂದು ಹೇಳಿದರು.

IIT website hacked
ಗೋಮೂತ್ರ ತಜ್ಞರಿಗೆ ಶಿಕ್ಷಣದ ಬಗ್ಗೆ ಏನು ಗೊತ್ತು: ಪದ್ಮಶ್ರೀ ಪುರಸ್ಕೃತ -ಮದ್ರಾಸ್ IIT ನಿರ್ದೇಶಕ ಡಾ. ಕಾಮಕೋಟಿಗೆ ತಿವಿದ ಪ್ರಿಯಾಂಕಾ!

ಅವರ ಪೋಸ್ಟ್‌ಗಳ ಪ್ರಕಾರ, ಅವರು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ, ನಿಗದಿತ ಶುಲ್ಕವನ್ನು ಪಾವತಿಸಿದ್ದಾರೆ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಅವರ ಸೈಬರ್ ಭದ್ರತಾ ಕೆಲಸದ ಪುರಾವೆಗಳನ್ನು ಸಲ್ಲಿಸಿದ್ದಾರೆ. ಆದಾಗ್ಯೂ, ಅವರು ಶಾರ್ಟ್‌ಲಿಸ್ಟ್ ಆಗಿಲ್ಲ ಮತ್ತು ಪ್ರವೇಶ ಪ್ರಕ್ರಿಯೆಯ ಭಾಗವಾಗಿರುವ ಹ್ಯಾಕಥಾನ್‌ನಲ್ಲಿ ಭಾಗವಹಿಸಲು ಅವಕಾಶವನ್ನು ನಿರಾಕರಿಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಸೈಬರ್ ಭದ್ರತೆಯಲ್ಲಿ ವಿದ್ಯಾರ್ಥಿಗೆ ಪೂರ್ವ ಅನುಭವವಿಲ್ಲದ ಕಾರಣ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ಐಐಟಿ-ಕೆ ನಿರ್ದೇಶಕ ಮಣೀಂದ್ರ ಅಗರವಾಲ್ ಪಿಟಿಐಗೆ ತಿಳಿಸಿದ್ದಾರೆ.

"ಈ ಶೈಕ್ಷಣಿಕ ಅವಧಿಯ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿದಿದೆ, ಆದ್ದರಿಂದ ಈಗ ಪ್ರವೇಶ ಸಾಧ್ಯವಿಲ್ಲ. ಆದಾಗ್ಯೂ, ನಾವು ವಿದ್ಯಾರ್ಥಿಯನ್ನು ಸಂಸ್ಥೆಗೆ ಆಹ್ವಾನಿಸುತ್ತೇವೆ, ಸರಿಯಾದ ಪರೀಕ್ಷೆಯ ಮೂಲಕ ಅವರ ತಾಂತ್ರಿಕ ಕೌಶಲ್ಯಗಳನ್ನು ನಿರ್ಣಯಿಸುತ್ತೇವೆ ಮತ್ತು ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರೆ, ಮುಂದಿನ ಪ್ರವೇಶದಲ್ಲಿ ಅವರಿಗೆ ಅವಕಾಶ ನೀಡುತ್ತೇವೆ" ಎಂದು ಅಗರವಾಲ್ ಹೇಳಿದರು.

ವಿದ್ಯಾರ್ಥಿ ಹ್ಯಾಕ್ ಮಾಡುವ ಮೂಲಕ ಐಐಟಿ-ಕೆ ಮತ್ತು ಐಐಟಿ ಮದ್ರಾಸ್‌ನ ಅಧಿಕೃತ ವೆಬ್‌ಸೈಟ್‌ಗಳ ಕೆಲವು ವಿಭಾಗಗಳಿಗೆ ಪ್ರವೇಶವನ್ನು ಪಡೆದಿದ್ದಾನೆ ಎಂದು ಅವರು ದೃಢಪಡಿಸಿದರು.

ವಿದ್ಯಾರ್ಥಿಯೊಂದಿಗೆ ಸಂವಹನ ನಡೆಸುವುದಕ್ಕೆ ಹಿರಿಯ ಅಧ್ಯಾಪಕರು ಮತ್ತು ಎಂಜಿನಿಯರ್‌ಗಳಿಗೆ ಹೇಳಲಾಗಿದ್ದು, ಕಂಪ್ಯೂಟರ್ ವ್ಯವಸ್ಥೆಗಳಿಗೆ ಅನಧಿಕೃತ ಪ್ರವೇಶ ಕಾನೂನುಬಾಹಿರ ಮತ್ತು ಅದನ್ನು ಎಂದಿಗೂ ಪುನರಾವರ್ತಿಸಬಾರದು ಎಂದು ಸಲಹೆ ನೀಡಲು ಸೂಚಿಸಲಾಗಿದೆ ಎಂದು ಅಗರವಾಲ್ ಹೇಳಿದರು.

ಗೌಪ್ಯತೆಯ ಷರತ್ತು ವಿಧಿಸಿ ಮಾತನಾಡಿರುವ ಐಐಟಿ-ಕೆ ಅಧಿಕಾರಿಯೊಬ್ಬರು, ಸಂಸ್ಥೆ ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ಪರಿಗಣಿಸಿತ್ತು ಆದರೆ ಮೊದಲು ವಿದ್ಯಾರ್ಥಿಯ ಹೇಳಿಕೆಗಳನ್ನು ಪರಿಶೀಲಿಸಲು ಮತ್ತು ಯಾವುದೇ ಮುಂದಿನ ಕ್ರಮ ತೆಗೆದುಕೊಳ್ಳುವ ಮೊದಲು ಅವರ ತಾಂತ್ರಿಕ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.

ಐಐಟಿ-ಕೆ ಈ ಹಿಂದೆ ಯುವ ಸೈಬರ್ ಭದ್ರತಾ ಪ್ರತಿಭೆಯನ್ನು ಪ್ರೋತ್ಸಾಹಿಸಿದೆ ಎಂದು ಅಧಿಕಾರಿ ಹೇಳಿದರು. ಈ ವರ್ಷದ ಆರಂಭದಲ್ಲಿ, CBSE ಯ ಆನ್‌ಲೈನ್ ಸ್ಕ್ರೀನ್-ಮಾರ್ಕಿಂಗ್ ಪೋರ್ಟಲ್‌ನಲ್ಲಿ ದುರ್ಬಲತೆಗಳನ್ನು ಗುರುತಿಸಿದ್ದ ಯುವಕನೊಬ್ಬನಿಗೆ ಅದು ತನ್ನ C3iHub ನಲ್ಲಿ ಸ್ಥಾನವನ್ನು ನೀಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com