

ಶ್ರೀನಗರ: ಜಂತರ್ ಮಂತರ್ನಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ತೀವ್ರ ರಾಜಕೀಯ ಟೀಕೆ ಮತ್ತು ಸಾರ್ವಜನಿಕ ಆಕ್ರೋಶ ಎದುರಿಸಿದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ.
ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಬಲಪ್ರಯೋಗವನ್ನು ಸಮರ್ಥಿಸುವಂತೆ ಕಂಡುಬಂದ ತಮ್ಮ ಹೇಳಿಕೆ "ನಾಲಿಗೆ ಜಾರಿ ಆಗಿದ್ದರಿಂದಾದ ತಪ್ಪು" (ಸ್ಲಿಪ್ ಆಫ್ ಟಂಗ್) ಎಂದು ಸ್ಪಷ್ಟಪಡಿಸಿದ ಅವರು, ತಮ್ಮ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಜೊತೆಗೆ, ತಮ್ಮ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಆರೋಪಿಸಿದ್ದಾರೆ.
"ನನ್ನ ಮಾತುಗಳಿಂದ ನನ್ನ ಜನರಿಗೆ ನೋವಾಗಿದ್ದರೆ ಅಥವಾ ಬೇಸರವಾಗಿದ್ದರೆ ನಾನು ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಅವರು ನನ್ನನ್ನು ತಮ್ಮವರಲ್ಲಿ ಒಬ್ಬಳೆಂದು ಪರಿಗಣಿಸುತ್ತಾರೆ ಮತ್ತು ಸಣ್ಣ ವಿಚಾರಗಳಿಗೂ ನನ್ನನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ನನ್ನ ಹೇಳಿಕೆಯಿಂದ ಅವರಿಗೆ ನೋವಾಗಿದ್ದರೆ ನನಗೆ ಅದಕ್ಕೆ ವಿಷಾದವಿದೆ" ಎಂದು ಹೇಳಿದ್ದಾರೆ.
"ನಾನು ಹೇಳಲು ಉದ್ದೇಶಿಸಿದ್ದು 'ಬಹಾನಾ ಬಂತಾ ಹೈ' (ನೆಪ ಮಾಡಿಕೊಳ್ಳುತ್ತಾರೆ) ಎಂಬುದಾಗಿತ್ತು. ಆದರೆ, ಆತುರದಲ್ಲಿ 'ಬಂತಾ ಹೈ' ಎಂದು ಹೇಳಿಬಿಟ್ಟೆ. ಅದು ನಾಲಿಗೆ ಜಾರಿ ಆದ ತಪ್ಪಾಗಿತ್ತು. ವೈರಲ್ ಆಗಿರುವ ವಿಡಿಯೊ ನಿಜವೇ, ಆದರೆ, ಅದಕ್ಕೆ ನೀಡಲಾಗುತ್ತಿರುವ ಅರ್ಥ ಸರಿಯಲ್ಲ" ಎಂದು ತಿಳಿಸಿದ್ದಾರೆ.
ಜುಲೈ 23ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವೇಳೆ ಮುಫ್ತಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದರು.
ದೆಹಲಿ ನಗರದಲ್ಲಿ ಪ್ರತಿಭಟನಾಕಾರರ ವಿರುದ್ಧ ಈ ರೀತಿಯ ಬಲಪ್ರಯೋಗವನ್ನು ಮೊದಲ ಬಾರಿಗೆ ನೋಡುತ್ತಿದ್ದೇವೆ. ಕಾಶ್ಮೀರದಲ್ಲಿ ಇದನ್ನು ಹಲವು ವರ್ಷಗಳಿಂದ ನೋಡಿದ್ದೇವೆ. ಅಲ್ಲಿ ಉಗ್ರಗಾಮಿತನವಿದೆ, ಆದ್ದರಿಂದ ಅದು ಅರ್ಥವಾಗುತ್ತದೆ (ಬಂತಾ ಹೈ)" ಎಂದು ಹೇಳಿದ್ದರು.
ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಬಲಪ್ರಯೋಗವನ್ನು ಮೆಹಬೂಬಾ ಮುಫ್ತಿ ಸಮರ್ಥಿಸಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಈ ಹೇಳಿಕೆಯನ್ನು ಆಧರಿಸಿ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮೆಹಬೂಬಾ ಮುಫ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕಾಶ್ಮೀರದಲ್ಲಿ ನಡೆದ ದಮನಕಾರಿ ಕ್ರಮವನ್ನು ಅವರು ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷದ ವಕ್ತಾರ ತನ್ವೀರ್ ಸಾದಿಕ್ ಪ್ರತಿಕ್ರಿಯಿಸಿ, "ಕಾಶ್ಮೀರದ ಜನರಿಗೆ, ವಿಶೇಷವಾಗಿ ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡ ಸಂತ್ರಸ್ತರಿಗೆ ಮೆಹಬೂಬಾ ಮುಫ್ತಿ ಅವರು ಯಾವುದೇ ಷರತ್ತಿಲ್ಲದೆ ಸ್ಪಷ್ಟ ಕ್ಷಮೆಯಾಚಿಸಬೇಕು. ಅದೊಂದೇ ಸರಿಯಾದ ಪ್ರತಿಕ್ರಿಯೆಯಾಗುತ್ತದೆ" ಎಂದು ಹೇಳಿದ್ದಾರೆ.
ಇದರ ಜೊತೆಗೆ, "ಜಮ್ಮು-ಕಾಶ್ಮೀರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅವರಿಗೆ ಅಧಿಕಾರ ನೀಡಿದ್ದಕ್ಕೂ ಅವರು ಕ್ಷಮೆಯಾಚಿಸಬೇಕು. ಇಂದು ಅವರು ಹೇಳಿರುವ ಉಳಿದ ಎಲ್ಲ ಮಾತುಗಳು ಮೂಲ ಹೇಳಿಕೆಯಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾತ್ರ" ಎಂದು ಆರೋಪಿಸಿದ್ದಾರೆ.