

ನವದೆಹಲಿ: "ನಿಮ್ಮಲ್ಲಿ ಸ್ವಲ್ಪವಾದರೂ ನಾಚಿಕೆ ಅಥವಾ ನೈತಿಕತೆ ಉಳಿದಿದ್ದರೆ, ಮೊದಲು ಗೃಹ ಸಚಿವ ಅಮಿತ್ ಶಾ ಅವರಿಂದ ರಾಜೀನಾಮೆ ಪಡೆಯಿಸಿ" ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ವಿದ್ಯಾರ್ಥಿಗಳ ವಿರುದ್ಧ ಕೇಂದ್ರ ಹಾಗೂ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ದ್ವೇಷದ ರಾಜಕಾರಣ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.
ಮೋದಿ ಅವರೇ, ಹತ್ತು ದಿನಗಳ ಹಿಂದೆ ನಿಮ್ಮ ಸರ್ಕಾರ ದೇಶದ ಯುವಕರ ಮೇಲೆ ಲಾಠಿ ಹಾಗೂ ಪೆಲೆಟ್ ಗನ್ಗಳನ್ನು ಬಳಸಿ ದಾಳಿ ನಡೆಸಿತು. ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಹಿಂಪಡೆದ ನಂತರ ಅವರ ವಿರುದ್ಧ ಎಫ್ಐಆರ್ ದಾಖಲಿಸಿ, ಬಲವಂತವಾಗಿ ಬಂಧನಕ್ಕೆ ಒಳಪಡಿಸುವ ಮೂಲಕ ಸರ್ಕಾರ ಪ್ರತೀಕಾರದ ರಾಜಕಾರಣ ಮಾಡುತ್ತಿದೆ.
ಯುವಕರು ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆಯ ಮೇರೆಗೆ ಪ್ರತಿಭಟನೆ ಹಿಂಪಡೆದಿದ್ದರು. ಆದರೆ, ಈಗ ನಿಮ್ಮ ಸರ್ಕಾರವೇ ಕೊಟ್ಟ ಮಾತು ತಪ್ಪುತ್ತಿದೆ. ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವತಿಯರ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವ (ಡಾಕ್ಸಿಂಗ್) ಪ್ರಯತ್ನಗಳು ನಡೆಯುತ್ತಿವೆ.
ಈ ವಿಚಾರದಲ್ಲಿ ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಯಾವುದೇ ಹೇಳಿಕೆ ನೀಡಲಿಲ್ಲ. ಅಹಂಕಾರ ಎಷ್ಟರ ಮಟ್ಟಿಗೆ ಇದೆ ಎಂದರೆ, ಅಮಿತ್ ಶಾ ಸಂಸತ್ತಿಗೆ ಬಂದು ಈ ವಿಚಾರದಲ್ಲಿ ಉತ್ತರಿಸುವ ಧೈರ್ಯವನ್ನೂ ತೋರಲಿಲ್ಲ.
ಇಮೇಜ್ ಉಳಿಸಿಕೊಳ್ಳುವ ಈ ತಂತ್ರಗಳು ಇನ್ನು ಮುಂದೆ ನಡೆಯುವುದಿಲ್ಲ. ಯುವಕರು ನಿಮ್ಮ ನಿಜಸ್ವರೂಪವನ್ನು ಅರಿತಿದ್ದಾರೆ. ನಿಮಗೆ ಸ್ವಲ್ಪವಾದರೂ ನಾಚಿಕೆ ಉಳಿದಿದ್ದರೆ, ಅಮಿತ್ ಶಾ ಅವರ ರಾಜೀನಾಮೆ ಪಡೆಯಿರಿ ಎಂದು ಆಗ್ರಹಿಸಿದ್ದಾರೆ.