

ನವದೆಹಲಿ: ತೆಲಂಗಾಣದಲ್ಲಿ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀಪು ನೀಡಿದೆ. ಮದುವೆಗೂ ಮುನ್ನ ಸೆಕ್ಸ್ ಗೆ ಒಪ್ಪಿದಾಕ್ಷಣ ಅದು ಕೆಟ್ಟ ಚಾರಿತ್ರ್ಯ ಅಂತಲ್ಲ. ಅದನ್ನು ಪ್ರಶ್ನಿಸಲು ಆಧಾರವಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ನ್ಯಾಯಾಲಯ ರದ್ದುಗೊಳಿಸಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯು ಅಭ್ಯರ್ಥಿಯ ತಾತ್ಕಾಲಿಕ ಆಯ್ಕೆಯನ್ನು ರದ್ದುಗೊಳಿಸಿದ್ದು ತಪ್ಪು ಎಂದು ಹೇಳಿದೆ. 2014ರಲ್ಲಿ ಅಭ್ಯರ್ಥಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದಲ್ಲಿ, ವಿವಾಹದ ಸುಳ್ಳು ಭರವಸೆಗಳ ಅಡಿಯಲ್ಲಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಅಭ್ಯರ್ಥಿಯ ಮೇಲೆ ಆರೋಪ ಹೊರಿಸಲಾಗಿತ್ತು, ಇದನ್ನು 2015 ರಲ್ಲಿ ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಯಿತು. ಅಭ್ಯರ್ಥಿಯು ಅರ್ಜಿ ನಮೂನೆಯಲ್ಲಿ ಇದರ ಸಂಪೂರ್ಣ ವಿವರಗಳನ್ನು ಒದಗಿಸಿದ್ದರು.
ಇಬ್ಬರು ಅವಿವಾಹಿತರ ನಡುವಿನ ಸಮ್ಮತಿಯ ದೈಹಿಕ ಸಂಬಂಧವು ವ್ಯಕ್ತಿಯ ಸ್ವಭಾವದ ಬಗ್ಗೆ ತಪ್ಪು ಅಭಿಪ್ರಾಯವನ್ನು ರೂಪಿಸಲು ಆಧಾರವಾಗಲು ಸಾಧ್ಯವಿಲ್ಲ . ಇಬ್ಬರು ವಯಸ್ಕರು ತಮ್ಮ ಆಯ್ಕೆಯ ಸಂಬಂಧಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರತಿಯೊಂದು ಸಂಬಂಧವು ಮದುವೆಯಲ್ಲಿ ಕೊನೆಗೊಳ್ಳುವುದಿಲ್ಲ ಎಂದು ಪೀಠ ಒತ್ತಿ ಹೇಳಿದೆ. ಆದ್ದರಿಂದ, ಒಂದು ಸಂಬಂಧವು ಮದುವೆಗೆ ಕಾರಣವಾಗಲಿಲ್ಲ ಎಂಬ ಕಾರಣಕ್ಕಾಗಿ ಒಬ್ಬರು ಮತ್ತೊಬ್ಬರನ್ನು ವಂಚಿಸಿದ್ದಾರೆ ಎಂದು ಭಾವಿಸುವುದು ತಪ್ಪು ಎಂದು ಕೋರ್ಟ್ ಹೇಳಿದೆ.
ಅಭ್ಯರ್ಥಿ ಮತ್ತು ದೂರುದಾರರು ನೆರೆಹೊರೆಯವರಾಗಿದ್ದು, ಹಲವು ವರ್ಷಗಳಿಂದ ಪರಿಚಯಸ್ಥರಾಗಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇತ್ಯರ್ಥಕ್ಕೆ ಒತ್ತಡ ಹೇರಲಾಗಿದೆ ಎಂದು ಸೂಚಿಸಲು ಯಾವುದೇ ದಾಖಲೆಗಳಿಲ್ಲ. ವಂಚನೆಯ ಆರೋಪವನ್ನು ದೂರುದಾರರ ಸಾಕ್ಷ್ಯದಿಂದ ಮಾತ್ರ ಸಾಬೀತುಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಈಗ ದೂರುದಾರರು ಪ್ರಕರಣವನ್ನು ಮುಂದುವರಿಸದ ಕಾರಣ, ನೇಮಕಾತಿ ಮಂಡಳಿಯು ಅಭ್ಯರ್ಥಿಯ ಪಾತ್ರವನ್ನು ಪ್ರಶ್ನಿಸಲು ಯಾವುದೇ ಆಧಾರವನ್ನು ಹೊಂದಿಲ್ಲ ಕೋರ್ಟ್ ಹೇಳಿದೆ.
Advertisement