

ಕೋಲ್ಕತ್ತಾ: ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ಭುಗಿಲೆದ್ದಿರುವ ಭಿನ್ನಮತ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಕೈಯಿಂದಲೇ ಜಾರುವ ಆತಂಕ ಎದುರಾಗಿದೆ.
ಟಿಎಂಸಿ ಸಂಸದೀಯ ಪಕ್ಷದಲ್ಲೂ ಭಿನ್ನಮತ ಸ್ಫೋಟಗೊಂಡಿದ್ದು, "ಭಿನ್ನಮತೀಯ" ಸಂಸದರಾದ ಜೂನ್ ಮಲಿಯಾ ಮತ್ತು ದೀಪಕ್ ಅಧಿಕಾರಿ(ದೇವ್) ಅವರು ಮಂಗಳವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಭೆಯಲ್ಲಿ ಭಾಗವಹಿಸಿದ್ದರು.
ಟಿಎಂಸಿಯ ಬಂಡಾಯವು ಸಂಸತ್ತನ್ನು ತಲುಪಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಹಿರಿಯ ನಾಯಕ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ 20 ಲೋಕಸಭಾ ಸಂಸದರು ಸೋಮವಾರ ಬಿಜೆಪಿ ನೇತೃತ್ವದ ಎನ್ಡಿಎಗೆ ಬೆಂಬಲ ಘೋಷಿಸಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿಕೊಂಡಿದ್ದರು.
ಇಂದು ಸಿಎಂ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಕೋಲಾಘಾಟ್ನಲ್ಲಿ ನಡೆದ ಸಭೆಯಲ್ಲಿ ಟಿಎಂಸಿ ಬಂಡಾಯ ಬಣದಲ್ಲಿ ಗುರುತಿಸಿಕೊಂಡಿರುವ ಮೇದಿನಿಪುರ ಸಂಸದ ಮಾಲಿಯಾ ಮತ್ತು ಘಾಟಲ್ ಸಂಸದ ದೇವ್ ಹಾಗೂ ಕೇಶ್ಪುರ ಶಾಸಕಿ ಸಿಯುಲಿ ಸಹಾ ಅವರು ಭಾಗವಹಿಸಿದ್ದರು.
ಟಿಎಂಸಿ ಶಾಸಕಿ ರಿತಬ್ರತಾ ಬ್ಯಾನರ್ಜಿ ಬೆಂಬಲಿತ 58 ಭಿನ್ನಮತೀಯ ಶಾಸಕರಲ್ಲಿ ಒಬ್ಬರಾದ ಮತ್ತು ಶಾಸಕಾಂಗ ಪಕ್ಷದ ಉಪ ನಾಯಕಿಯಾಗಿ ಆಯ್ಕೆಯಾಗಿರುವ ಸಹಾ, ತಾವು ಜನ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ಎಂದು ಹೇಳಿದ್ದಾರೆ.
"ಅದಕ್ಕಾಗಿಯೇ ನಾನು ಮುಖ್ಯಮಂತ್ರಿಯವರ ಸಭೆಯಲ್ಲಿ ಭಾಗವಹಿಸಲು ಬಂದಿದ್ದೇನೆ" ಎಂದು ಅವರು ಸಭೆಯಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರಿಗೆ ತಿಳಿಸಿದರು.
ಪುರ್ಬಾ ಮೇದಿನಿಪುರದ ಮೊಯ್ನಾ ಕ್ಷೇತ್ರದ ಬಿಜೆಪಿ ಶಾಸಕ ಅಶೋಕ್ ದಿಂಡಾ ಅವರು, ವಿರೋಧ ಪಕ್ಷದ ಪ್ರತಿನಿಧಿಗಳು ಸಹ ಇಂತಹ ಸಭೆಗಳಲ್ಲಿ ಭಾಗವಹಿಸುವುದು "ನಿಜವಾದ ಬದಲಾವಣೆಯ" ಸಂಕೇತ ಎಂದು ಹೇಳಿದ್ದಾರೆ.
Advertisement