

ಪಶ್ಚಿಮ ಬಂಗಾಳದ ಖಾರ-ಹುಳಿ ರುಚಿಯ ‘ಝಲ್ ಮುರಿ’ಯನ್ನು ರಾಷ್ಟ್ರೀಯ ಸ್ನ್ಯಾಕ್ಸ್ ಆಗಿ ಘೋಷಿಸುವ ಸಮಯ ಬಂದಿದೆಯೇ? ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಝಲ್ ಮುರಿ ಸ್ನ್ಯಾಕ್ಸ್ ಮೇಲೆ ಆಸಕ್ತಿ ಹೆಚ್ಚಿದಂತೆ ಅನಿಸುತ್ತದೆ.
ಭಾರತದ ಅತಿ ದೀರ್ಘಾವಧಿಯ ಚುನಾಯಿತ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರ ಸಾಧನೆಯನ್ನು ಸಂಭ್ರಮಿಸಲು ನಿನ್ನೆ ಬುಧವಾರ ದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಎನ್ಡಿಎ ಸಭೆಯಲ್ಲೆ ಝಲ್ಮುರಿ ಮತ್ತೊಮ್ಮೆ ವಿಶೇಷ ಆಕರ್ಷಣೆಯಾಯಿತು.
ಆಡಳಿತಾರೂಢ ರಾಷ್ಟ್ರೀಯ ಜನತಾಂತ್ರಿಕ ಮೈತ್ರಿ (NDA)ಯ ಎಲ್ಲಾ ಮಿತ್ರಪಕ್ಷಗಳ ನಾಯಕರು ಹಾಗೂ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕತ್ವ ಈ ಮಹತ್ವದ ಸಭೆಯಲ್ಲಿ ಭಾಗವಹಿಸಿತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸ್ವತಃ ಝಲ್ಮುರಿ ತಯಾರಿಸಿ ಪ್ರಧಾನಿ ಮೋದಿ ಅವರಿಗೆ ನೀಡುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಜಾರ್ಗ್ರಾಮ್ ಪಟ್ಟಣದ ರಾಜ್ ಕಾಲೇಜ್ ಮೋರ್ ಸಮೀಪದ ಬಿಕ್ರಂ ಕುಮಾರ್ ಸೌ ನಡೆಸುವ ಝಲ್ಮುರಿ ಅಂಗಡಿಯಲ್ಲಿ ಕಳೆದ ಏಪ್ರಿಲ್ 19ರಂದು ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಿಂದ ಹಿಂದಿರುಗುವ ವೇಳೆ ಅಲ್ಲೇ ನಿಂತು ಝಲ್ಮುರಿ ಖರೀದಿಸಿ ಸವಿದ ನಂತರ ದೇಶದಾದ್ಯಂತ ಸುದ್ದಿಯಾಗಿತ್ತು.
ಪ್ರಧಾನಿ ಮೋದಿ ಅವರ ಭೇಟಿಯ ನಂತರ ಆ ಸಣ್ಣ ರಸ್ತೆಬದಿಯ ಅಂಗಡಿ ಸ್ಥಳೀಯರಷ್ಟೇ ಅಲ್ಲದೆ ಸಾರ್ವಜನಿಕರ ಆಕರ್ಷಣೆಯ ಕೇಂದ್ರವಾಗಿದ್ದು, ಝಲ್ಮುರಿಯ ಜನಪ್ರಿಯತೆ ದೇಶಾದ್ಯಂತ ಹಲವು ಪಟ್ಟು ಹೆಚ್ಚಾಯಿತು.
ಬಂಗಾಳದ ಸ್ನ್ಯಾಕ್ಸ್ ಆಹಾರ ಝಲ್ಮುರಿಯಷ್ಟೇ ಅಲ್ಲ. ಬಂಗಾಳದ ಜನಪ್ರಿಯ ಸಾಂಪ್ರದಾಯಿಕ ಆಹಾರವಾದ ‘ಮಾಚ್-ಭಾತ್’ (ಮೀನು-ಅನ್ನ) ಕೂಡ ವಿವಿಧ ಪಕ್ಷಗಳ ನಾಯಕರು ಪ್ರಚಾರದ ವೇಳೆ ಅದನ್ನು ಸವಿಯುವ ಮೂಲಕ ಗಮನ ಸೆಳೆಯಿತು.
ಗೃಹ ಸಚಿವ ಅಮಿತ್ ಶಾ ಸೋಷಿಯಲ್ ಮೀಡಿಯಾ ಪೋಸ್ಟ್
ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿರುವ ಒಂದು ನಿಗೂಢ ಪೋಸ್ಟ್ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದೂ ವಿಶೇಷವಾಗಿ ತೃಣಮೂಲ ಕಾಂಗ್ರೆಸ್ (TMC) ಸಂಸತ್ತಿನಲ್ಲಿ ದೊಡ್ಡ ಬಂಡಾಯವನ್ನು ಎದುರಿಸುತ್ತಿರುವ ದಿನವೇ ಈ ಪೋಸ್ಟ್ ಪ್ರಕಟವಾಗಿರುವುದು ಕುತೂಹಲ ಹೆಚ್ಚಿಸಿದೆ.
ನಿನ್ನೆಯ ಸಭೆಯ ನಂತರ ಝಲ್ ಮುರಿ ಪೋಸ್ಟ್ ಹಾಕಿದ ಅಮಿತ್ ಶಾ “Relished Tangy, Masaledar and Crunchy Jhalmuri at the NDA meeting” (ಎನ್ಡಿಎ ಸಭೆಯಲ್ಲಿ ಖಾರ, ಮಸಾಲೆಯುಕ್ತ ಮತ್ತು ಕರಕರೆಯಾದ ಝಲ್ಮುರಿಯನ್ನು ಸವಿದು ಆನಂದಿಸಿದೆ) ಎಂದು ಬರೆದುಕೊಂಡಿದ್ದರು.
ಮೇಲ್ನೋಟಕ್ಕೆ ಇದು ಕೇವಲ ಆಹಾರದ ಬಗ್ಗೆ ಮಾಡಿದ ಸಾಮಾನ್ಯ ಪೋಸ್ಟ್ನಂತೆ ಕಂಡರೂ, ರಾಜಕೀಯ ವಿಶ್ಲೇಷಕರು ಇದರಲ್ಲಿ ಅಡಗಿರುವ ಸಂದೇಶವನ್ನು ಗುರುತಿಸಲು ಆರಂಭಿಸಿದ್ದಾರೆ. ಏಕೆಂದರೆ Tangy, Masaledar ಮತ್ತು Crunchy ಎಂಬ ಪದಗಳ ಮೊದಲ ಅಕ್ಷರಗಳಾದ T, M ಮತ್ತು C ಸೇರಿ “TMC” ಎಂಬ ಸಂಕ್ಷಿಪ್ತ ರೂಪವನ್ನು ಸೂಚಿಸುತ್ತವೆ.
ಬಿಜೆಪಿಯ ಪ್ರಮುಖ ರಾಜಕೀಯ ತಂತ್ರಜ್ಞರಲ್ಲಿ ಒಬ್ಬರಾಗಿರುವ ಅಮಿತ್ ಶಾ ಅವರಿಂದ ಬಂದಿರುವ ಈ ಪೋಸ್ಟ್ನಲ್ಲಿ, ಬಂಗಾಳದ ಪ್ರಸಿದ್ಧ ಸ್ನ್ಯಾಕ್ಸ್ ಆದ ಝಲ್ಮುರಿಯನ್ನು ಬಳಸಿಕೊಂಡು ಪರೋಕ್ಷ ರಾಜಕೀಯ ಸಂದೇಶ ನೀಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಿನ್ನೆ, ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಟಿಎಂಸಿಯ 20 ಬಂಡಾಯ ಲೋಕಸಭಾ ಸಂಸದರು ಪಕ್ಷದಿಂದ ಬೇರ್ಪಟ್ಟು ಎನ್ಡಿಎಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಧಿಕೃತವಾಗಿ ತಿಳಿಸಿರುವ ಸುದ್ದಿ ಹೊರಬಂದಿತ್ತು.
ಅಮಿತ್ ಶಾ ಅವರು ತಮ್ಮ ಪೋಸ್ಟ್ನಲ್ಲಿ ಎಲ್ಲಿಯೂ ಮಮತಾ ಬ್ಯಾನರ್ಜಿ, ಟಿಎಂಸಿ ಅಥವಾ ಸಂಸತ್ತಿನಲ್ಲಿನ ಬಂಡಾಯದ ಬಗ್ಗೆ ನೇರವಾಗಿ ಉಲ್ಲೇಖಿಸಿಲ್ಲ. ಆದರೆ ಸಾರ್ವಜನಿಕ ಸಂಪರ್ಕ ಮತ್ತು ರಾಜಕೀಯ ಸಂದೇಶಗಳಲ್ಲಿ ಸಂಕೇತಾತ್ಮಕ ಶೈಲಿಗೆ ಹೆಸರುವಾಸಿಯಾದ ಬಿಜೆಪಿ ನಾಯಕತ್ವದ ಹಿನ್ನೆಲೆಯಲ್ಲಿ, ಪದಗಳ ಆಯ್ಕೆಯಲ್ಲಿರುವ ಅಕ್ಷರಗಳನ್ನು ಅನೇಕರು ರಾಜಕೀಯ ವ್ಯಂಗ್ಯದ ಸೂಕ್ಷ್ಮ ಮಾದರಿಯಾಗಿ ನೋಡುತ್ತಿದ್ದಾರೆ.
Advertisement