

ಕಾಂಗ್ರೆಸ್ 1947ರಲ್ಲೇ ಮತ ಕಳವು ಆರಂಭಿಸಿತ್ತು. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ 14 ಮತಗಳು ಬಂದಿದ್ದರೆ, ಜವಹರಲಾಲ್ ನೆಹರೂ ಅವರಿಗೆ ಕೇವಲ ಒಂದು ಮತ ಮಾತ್ರ ಬಂದಿತ್ತು. ಆದರೂ ನೆಹರೂ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಲಾಯಿತು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ಹೇಳಿಕೆಗೆ ಬಿಜೆಪಿ ಸಂಸದ ರಘುನಂದನ್ ರಾವ್ ತಿರುಗೇಟು ನೀಡಿದ್ದಾರೆ.
ಮತಕಳ್ಳತನ ಮತ್ತು ಸೀಟುಕಳ್ಳತನ ಕಾಂಗ್ರೆಸ್ ಪಕ್ಷವೇ ಆರಂಭಿಸಿದ್ದು, ಅದು ದೇಶಕ್ಕೆ ಸ್ವಾತಂತ್ರ್ಯ ಬಂದ 1947ರಲ್ಲಿಯೇ ಆರಂಭವಾಗಿತ್ತು. ಕಾಂಗ್ರೆಸ್ ನ ಎಲ್ಲಾ ಕಾರ್ಯಕಾರಿ ಸದಸ್ಯರು ಒಬ್ಬ ವ್ಯಕ್ತಿಯನ್ನು ಪ್ರಧಾನಿ ಎಂದು ಆಯ್ಕೆ ಮಾಡಲು ತೀರ್ಮಾನಿಸಿದಾಗ ಅಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೆ ಹೆಚ್ಚು ಮತಗಳು ಚಲಾವಣೆಯಾದವು. ನೆಹರೂ ಅವರಿಗೆ ಸಿಕ್ಕಿದ್ದು ಕೇವಲ ಒಂದು ಮತ, ಆದರೂ ಅವರನ್ನು ದೇಶದ ಪ್ರಧಾನಿ ಎಂದು ನಾಮನಿರ್ದೇಶನ ಮಾಡಲಾಯಿತು ಎಂದು ಟೀಕಿಸಿದರು.
ಮತಗಳ್ಳತನ ಕಾಂಗ್ರೆಸ್ ನ ಇತಿಹಾಸವಾಗಿದೆ, ಅದುವೇ ಆರಂಭಿಸಿದ್ದು, ಹೀಗಿರುವಾಗ ರೇವಂತ್ ರೆಡ್ಡಿಯವರು ಬಿಜೆಪಿ ಮತಗಳ್ಳತನ ಆರಂಭಿಸಿದ್ದು ಎಂದು ಹೇಗೆ ಹೇಳುತ್ತಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನ ಪೂರ್ವಜನರು, ಹೆಜ್ಜೆಗುರುತಿನಲ್ಲಿಯೇ ಮತಗಳ್ಳತನ, ಹುದ್ದೆಯ ವಂಚನೆ ಇದೆ, ಕಾಂಗ್ರೆಸ್ ಹಿರಿಯ ನಾಯಕರು ಇದನ್ನು ಕಲಿಸಿದರು ಎಂದು ವ್ಯಂಗ್ಯವಾಡಿದ್ದಾರೆ.
ಎಐಸಿಸಿ ತೆಲಂಗಾಣ ಉಸ್ತುವಾರಿ ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭಾ ನಾಮಪತ್ರ ತಿರಸ್ಕೃತಗೊಂಡಿರುವ ವಿಚಾರದಲ್ಲಿ ಬಿಜೆಪಿ ಹಾಗೂ ಬಿಆರ್ಎಸ್ ಪಕ್ಷಗಳು ಸುಳ್ಳು ಪ್ರಚಾರ ನಡೆಸುತ್ತಿದ್ದು, ಮಧ್ಯಪ್ರದೇಶದಲ್ಲಿ ನಡೆದಿರುವ "ಪ್ರಜಾಪ್ರಭುತ್ವ ವಿರೋಧಿ" ಘಟನೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿವೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪಿಸಿದ್ದರು.
ಬಿಜೆಪಿ ಇದುವರೆಗೆ "ಮತ ಕಳ್ಳತನ" (Vote Chori) ಮಾಡುವ ಪಕ್ಷವೆಂದೇ ಗುರುತಿಸಿಕೊಂಡಿತ್ತು. ಈಗ ಅದು "ಸೀಟ್ ಕಳ್ಳತನ" (Seat Chori) ಮಾಡುವ ಮಟ್ಟಕ್ಕೆ ಬೆಳೆದಿದೆ ಎಂದು ಟೀಕಿಸಿದ್ದರು.
Advertisement