‘ನನ್ನ ಮೇಲೆ ನಡೆದ ದಾಳಿಯ ಹಿಂದೆ RSS ಜನರಿದ್ದಾರೆ, ವಿದ್ಯಾರ್ಥಿಗಳ ಧ್ವನಿ ಹತ್ತಿಕ್ಕುವ ಪ್ರಯತ್ನ': ಸಿಜೆಪಿ ಸಂಸ್ಥಾಪಕ ದೀಪ್ಕೆ ಆರೋಪ-Video

ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಲು ಹಾಗೂ ಎನ್‌ಇಇಟಿ (UG) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಯನ್ನು ಒತ್ತಾಯಿಸಲು, ದೀಪ್ಕೆ ಇಂದು ಬೆಳಗ್ಗೆ ನಾಗಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
Abhijit Deepke
ಅಭಿಜಿತ್ ದೀಪ್ಕೆ
Updated on

ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಇಂದು ಮಂಗಳವಾರ, ಜೈಪುರದಲ್ಲಿ ನಡೆದ ಪ್ರತಿಭಟನೆಯ ವೇಳೆ ತಮ್ಮ ಮೇಲೆ ನಿನ್ನೆ ನಡೆದ ದಾಳಿಯ ಹಿಂದೆ “ಆರ್‌ಎಸ್‌ಎಸ್‌ನ ಕೆಲವು ಜನರು ಇದ್ದಾರೆ ಎಂದು ಆರೋಪಿಸಿದರು. ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಹಾಗೂ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಪ್ರಯತ್ನ ಇದಾಗಿತ್ತು ಎಂದು ಅವರು ಆರೋಪಿಸಿದರು.

ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಲು ಹಾಗೂ ಎನ್‌ಇಇಟಿ (UG) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಯನ್ನು ಒತ್ತಾಯಿಸಲು, ದೀಪ್ಕೆ ಇಂದು ಬೆಳಗ್ಗೆ ನಾಗಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಪ್ರತಿಭಟನೆ ಸಂವಿಧಾನ ಚೌಕದಲ್ಲಿ ನಡೆಯಲಿದೆ.

ನಿನ್ನೆ ಜೈಪುರದಲ್ಲಿ ನಡೆದ ಪ್ರತಿಭಟನೆಯ ವೇಳೆ, ಬೆಂಬಲಿಗರು ದೀಪ್ಕೆ ಅವರನ್ನು ತಮ್ಮ ಭುಜಗಳ ಮೇಲೆ ಹೊತ್ತುಕೊಂಡು ಸಾಗುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಅವರಿಗೆ ಅನೇಕ ಬಾರಿ ಕಪಾಳಮೋಕ್ಷ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಘಟನೆಯ ಸಂಬಂಧ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ದಾಳಿಯ ಹಿಂದೆ ಯಾರು ಇದ್ದಾರೆ ಎಂದು ಕೇಳಿದಾಗ, ದೀಪ್ಕೆ, ಅಲ್ಲಿ ಆರ್‌ಎಸ್‌ಎಸ್‌ (Rashtriya Swayam Sevak Sangh)ಗೆ ಸೇರಿದ ಕೆಲವು ಜನರು ಇದ್ದರು. ಇದರಲ್ಲಿ ಹೊಸದೇನೂ ಇಲ್ಲ ಎಂದು ಹೇಳಿದರು.

ಯಾರಾದರೂ ಸರ್ಕಾರದ ವಿರುದ್ಧ ಅಥವಾ ಅವರ ಸಿದ್ಧಾಂತದ ವಿರುದ್ಧ ಮಾತನಾಡಿದಾಗ, ಅವರು ಹೀಗೆ ಮಾಡುತ್ತಾರೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಆರೋಪಿಸಿದರು.

ತಮ್ಮ ಆರ್‌ಎಸ್‌ಎಸ್‌ ಜೊತೆಗಿನ ಸಂಬಂಧಗಳ ಬಗ್ಗೆ ಹಾಗೂ ತಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೇನೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ದೀಪ್ಕೆ, ಅದಕ್ಕಾಗಿಯೇ ಅವರು ನಿನ್ನೆ ನನ್ನ ಮೇಲೆ ದಾಳಿ ಮಾಡಿದರೇ ಎಂದು ಪ್ರಶ್ನಿಸಿದರು.

ಈ ಘಟನೆ ಮೂಲ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಹಾಗೂ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ನಡೆದ ಪ್ರಯತ್ನ ಎಂದು ಅವರು ಅಭಿಪ್ರಾಯಪಟ್ಟರು.

ನಾವು ನಮ್ಮ ವಿಷಯಗಳಿಂದ ಹಿಂದೆ ಸರಿಯುವುದಿಲ್ಲ. ನೀವು ಎಷ್ಟೇ ದಾಳಿ ಮಾಡಿದರೂ ನಾವು ಶಾಂತಿಯುತವಾಗಿ ಮತ್ತು ಪ್ರಜಾಪ್ರಭುತ್ವದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ. ನಮ್ಮ ಮುಖ್ಯ ವಿಷಯದಿಂದ ದೂರ ಸರಿಯುವುದಿಲ್ಲ. ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅನ್ಯಾಯ ಅನುಭವಿಸುತ್ತಿದ್ದಾರೆ, ಅದರ ಹೊಣೆಗಾರಿಕೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಹೊತ್ತುಕೊಳ್ಳಬೇಕು ಎಂದು ಅವರು ಹೇಳಿದರು.

ಇಂತಹ ದಾಳಿಗಳು ಮುಂದುವರಿಯುತ್ತವೆ. ಆದರೆ ನನಗೆ ಭಯವಿಲ್ಲ. ನಾವು ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಇದು ನಮ್ಮ ಸತ್ಯಾಗ್ರಹ. ನಾವು ಶಾಂತಿಯುತವಾಗಿ ಮುಂದುವರಿಯುತ್ತೇವೆ ಎಂದು ಹೇಳಿದರು.

ನಾಗಪುರದ ನಿವಾಸಿಗಳು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಕರು, ಇಂದು ಸಂಜೆ 4 ಗಂಟೆಗೆ ಸಂವಿಧಾನ ಚೌಕದಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ದೀಪ್ಕೆ ಮನವಿ ಮಾಡಿದರು.

ಎನ್‌ಇಇಟಿ (UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಯನ್ನು ಸಿಜೆಪಿ ಒತ್ತಾಯಿಸುತ್ತಿದೆ. ಪ್ರತಿಭಟನೆಗಾಗಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2,000 ಕ್ಕೂ ಹೆಚ್ಚು ಯುವಕರು ಭಾಗವಹಿಸುವ ನಿರೀಕ್ಷೆಯಿದ್ದು, ಸಭೆಯ ಹಿನ್ನೆಲೆಯಲ್ಲಿ ನಾಗಪುರದ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com