

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಮಂಗಳವಾರ ರೈತರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ಪರಿಷ್ಕೃತ ಬೆಳೆ ಸಾಲ ಮನ್ನಾ ಯೋಜನೆಯನ್ನು ಘೋಷಿಸಿದ್ದಾರೆ.
ರೈತ ಸಂಘಗಳು ಮತ್ತು ರಾಜಕೀಯ ಪಕ್ಷಗಳ ಬೇಡಿಕೆಗಳನ್ನು ಅನುಸರಿಸಿ ಸಿಎಂ ವಿಜಯ್ ಅವರು, ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದ 75,000 ರೂ.ಗಳವರೆಗಿನ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಈ ಹಿಂದೆ ಕಳೆದ ಮೇ 25 ರಂದು, 50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ ಯೋಜನೆ ಘೋಸಿದ್ದ ಸಿಎಂ, ಇದೀಗ ಅದನ್ನು ಪರಿಷ್ಕರಿಸಿದ್ದು, 75,000 ರೂ.ವರೆಗೆ ವಿಸ್ತರಿಸಿದ್ದಾರೆ. 75 ಸಾವಿರ ರೂ. ಗಳಿಗಿಂತ ಹೆಚ್ಚಿನ ಸಾಲ ಹೊಂದಿರುವ ರೈತರು ತಲಾ 35,000 ರೂ.ಗಳ ಮನ್ನಾಕ್ಕೆ ಅರ್ಹರಾಗಿರುತ್ತಾರೆ.
ಕಳೆದ ವರ್ಷ ಮೇ 1 ರಿಂದ ಈ ವರ್ಷ ಫೆಬ್ರವರಿ 28 ರವರೆಗೆ ಸಹಕಾರಿ ಬ್ಯಾಂಕುಗಳಿಂದ ಬೆಳೆ ಸಾಲ ಪಡೆದ 14,43,504 ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ. ಈ ಕ್ರಮದಿಂದ ರಾಜ್ಯ ಸರ್ಕಾರಕ್ಕೆ 5,932.23 ಕೋಟಿ ರೂ. ಹೊರೆಯಾಗಲಿದೆ.
ಇದಕ್ಕೂ ಮೊದಲು, ಕಳೆದ ಮೇ 25 ರಂದು, ಸರ್ಕಾರವು ಸಣ್ಣ ರೈತರಿಗೆ 50,000 ರೂ.ಗಳವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಟಿವಿಕೆ ಚುನಾವಣಾ ಪ್ರಣಾಳಿಕೆಗೆ ಅನುಗುಣವಾಗಿ, ಐದು ಎಕರೆವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಮತ್ತು ಐದು ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ರೈತರಿಗೆ ಶೇ. 50 ರಷ್ಟು ಮನ್ನಾ ಮಾಡಬೇಕೆಂದು ಒತ್ತಾಯಿಸಿ ರೈತರ ಒಂದು ವರ್ಗ ಪ್ರತಿಭಟನೆ ನಡೆಸಿದ ನಂತರ ಪರಿಷ್ಕೃತ ಯೋಜನೆ ಘೋಷಿಸಲಾಗಿದೆ.
ಒಟ್ಟು ಫಲಾನುಭವಿಗಳಲ್ಲಿ 75,000 ರೂ.ವರೆಗಿನ ಸಾಲ ಹೊಂದಿರುವ 6.22 ಲಕ್ಷಕ್ಕೂ ಹೆಚ್ಚು ರೈತರು ಸಂಪೂರ್ಣ ಮನ್ನಾ ಪ್ರಯೋಜನ ಪಡೆಯುತ್ತಾರೆ. ಅದಕ್ಕಿಂತಲೂ ಹೆಚ್ಚಿನ ಸಾಲ ಹೊಂದಿದವರಲ್ಲಿ 8.21 ಲಕ್ಷ ರೈತರ ಸಾಲ ತಲಾ 35,000 ರೂ. ಮನ್ನಾ ಆಗಲಿದೆ. ಇದು ಸಿಎಂ ವಿಜಯ್ ಸರ್ಕಾರ ಇದುವೆರೆಗೆ ಘೋಷಿಸಿದ ಅತಿದೊಡ್ಡ ರೈತ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
Advertisement