

ನವದೆಹಲಿ: ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG 2026 ಪ್ರಶ್ನೆಪತ್ರಿಕೆ ಲೀಕ್ ತಡೆಯಲು ವಿಫಲವಾಗಿದ್ದ ಮೋದಿ ಸರ್ಕಾರ, ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಮ್’ ಅನ್ನು ಜೂನ್ 22 ರವರೆಗೆ ತಾತ್ಕಾಲಿಕವಾಗಿ ನಿಷೇಧಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಟೆಲಿಗ್ರ್ಯಾಮ್ ಸಂಸ್ಥೆ ಮತ್ತು ಅದರ ಸಿಇಒ ಪಾವೆಲ್ ಡುರೊವ್ ತೀವ್ರ ಆಕ್ರೋಶ ಹೊರಹಾಕಿದ್ದು, ಭಾರತ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬುಧವಾರ ದೆಹಲಿ ಹೈಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿದ್ದಾರೆ.
ಜೂನ್ 22 ರವರೆಗೆ ಸರ್ಕಾರ ಟೆಲಿಗ್ರಾಮ್ ಮೇಲೆ ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸಿದೆ. ಈ ಕ್ರಮವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್ಟಿಎ) ಸ್ವಾಗತಿಸಿದೆ. ಇದು ಪರೀಕ್ಷಾ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ವಂಚನೆ ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ರಜಾ ಪೀಠದ ಮುಂದೆ ವಕೀಲ ಮಾಧವ್ ಖೋಸ್ಲಾ ಅವರು ಟೆಲಿಗ್ರಾಮ್ ಪರವಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಮಧ್ಯಾಹ್ನದ ನಂತರ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ನೇರ ವಾಗ್ದಾಳಿ ನಡೆಸಿರುವ ಪಾವೆಲ್, ಮೋದಿ ಸರ್ಕಾರದ ಈ ಕ್ರಮವು ಪೇಪರ್ ಲೀಕ್ ಮಾಡಿದ ಅಸಲಿ ಅಪರಾಧಿಗಳನ್ನು ಹಿಡಿಯುವಲ್ಲಿನ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೈಗೊಂಡಿರುವ ಹತಾಶ ಯತ್ನವಾಗಿದೆ ಎಂದು ಟೀಕಿಸಿದ್ದಾರೆ.
ಪರೀಕ್ಷಾ ಮಂಡಳಿಯ ಒಳಗಿನ ಲೋಪದೋಷಗಳನ್ನು ಸರಿಪಡಿಸುವ ಬದಲು, ದೇಶದಲ್ಲಿ ಶೈಕ್ಷಣಿಕ ಮತ್ತು ವೃತ್ತಿಪರ ಕೆಲಸಗಳಿಗಾಗಿ ಈ ಆ್ಯಪ್ ಬಳಸುತ್ತಿದ್ದ 15 ಕೋಟಿಗೂ ಹೆಚ್ಚು ಸಾಮಾನ್ಯ ಭಾರತೀಯ ಬಳಕೆದಾರರಿಗೆ ಸರ್ಕಾರ ಅನಗತ್ಯವಾಗಿ ತೊಂದರೆ ಕೊಟ್ಟಿದೆ ಎಂದು ಪಾವೆಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, ಇಡೀ ಪ್ಲಾಟ್ಫಾರ್ಮ್ ಅನ್ನು ನಿಷೇಧಿಸಿರುವುದರಿಂದ ಪರೀಕ್ಷಾ ಅಕ್ರಮಗಳೇನೂ ನಿಲ್ಲುವುದಿಲ್ಲ, ಬದಲಿಗೆ ವಂಚಕರು ಬೇರೆ ಆ್ಯಪ್ಗಳಿಗೆ ವಲಸೆ ಹೋಗಲಿದ್ದಾರಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಪರೀಕ್ಷಾ ವಂಚನೆ ನಡೆಸುತ್ತಿದ್ದ ನೂರಾರು ಚಾನಲ್ಗಳನ್ನು ಭಾರತೀಯ ಸೈಬರ್ ಪೊಲೀಸರ ಕೋರಿಕೆಯ ಮೇರೆಗೆ ಈಗಾಗಲೇ ಡಿಲೀಟ್ ಮಾಡಿದ್ದರೂ, ಸರ್ಕಾರ ಇಡೀ ಆ್ಯಪ್ ಅನ್ನೇ ನಿರ್ಬಂಧಿಸಿರುವುದು ದೊಡ್ಡ ತಪ್ಪು ನಿರ್ಧಾರ ಎಂದು ಅವರು ವಾದಿಸಿದ್ದಾರೆ. ಇಂಟರ್ನೆಟ್ ಸ್ವಾತಂತ್ರ್ಯ ಪರ ಹೋರಾಡುವ ದೇಶದ ಹಲವು ಸ್ವತಂತ್ರ ಸಂಸ್ಥೆಗಳೂ ಸಹ ಸರ್ಕಾರದ ಈ ಕ್ರಮವನ್ನು “ಅಪ್ರಾಯೋಗಿಕ” ಎಂದು ಟೀಕಿಸಿದ್ದಾರೆ.
Advertisement