

ಅಯೋಧ್ಯೆ: ಅಯೋಧ್ಯೆಗೆ ಕಳಂಕ ತರುವ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕಾರ್ಯನಿರ್ವಹಣೆಯ ಬಗ್ಗೆ ಅನುಮಾನ ಬರುವಂತೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್ಐಟಿ ಸತ್ಯವನ್ನು ಬಹಿರಂಗಪಡಿಸುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ 88ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅಯೋಧ್ಯೆಯ ಶ್ರೀ ಮಣಿ ರಾಮ್ ದಾಸ್ ಛಾವಾನಿಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಮಾತನಾಡಿದರು.
ರಾಮ ಮಂದಿರದ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಕುರಿತು ತನಿಖೆಗೆ ಎಸ್ಐಟಿ ರಚಿಸಿದ ಬೆನ್ನಲ್ಲೇ ಆದಿತ್ಯನಾಥ್ ಅವರ ಈ ಹೇಳಿಕೆ ಬಂದಿದೆ.
ವಿವಾದವನ್ನು ಉಲ್ಲೇಖಿಸಿದ ಯೋಗಿ ಆದಿತ್ಯನಾಥ್ ಅವರು, ಅಯೋಧ್ಯೆಗೆ 'ಕಳಂಕ ತರಲು' ಮತ್ತು 'ಶ್ರೀ ರಾಮ ಜನ್ಮಭೂಮಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಲು' ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
"ಭಾರತವು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿದಾಗಲೆಲ್ಲಾ, ಪಿತೂರಿಗಾರರು ನಿದ್ರೆ ಕಳೆದುಕೊಂಡು ಸಂಚು ರೂಪಿಸಲು ಆರಂಭಿಸಿದ್ದಾರೆ. ಅದೇ ಪಿತೂರಿ ಮತ್ತೆ ಪ್ರಾರಂಭವಾಗಿದೆ" ಎಂದು ಅವರು ಹೇಳಿದರು.
ಶ್ರೀರಾಮನ ಹೆಸರಿನಲ್ಲಿ ನೀಡಲಾದ ದೇಣಿಗೆಯ ದುರುಪಯೋಗ ಆರೋಪದ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲಾಗುವುದು. "ತಪ್ಪಿತಸ್ಥರು ಯಾರೇ ಆಗಿದ್ದರೂ ಬಿಡುವುದಿಲ್ಲ" ಎಂದು ಭಕ್ತರಿಗೆ ಭರವಸೆ ನೀಡುತ್ತೇನೆ. ವಿಶೇಷ ತನಿಖಾ ತಂಡ(SIT) 15 ದಿನಗಳಲ್ಲಿ "ಸತ್ಯವನ್ನು ಸುಳ್ಳಿನಿಂದ" ಬೇರ್ಪಡಿಸುತ್ತದೆ ಎಂದು ಹೇಳುವ ಮೂಲಕ ಅವರು ತನಿಖೆಗೆ ಸ್ಪಷ್ಟ ಗಡುವನ್ನು ಸಹ ನಿಗದಿಪಡಿಸಿದರು.
ದೇವಾಲಯದ ದೇಣಿಗೆಯಿಂದ ಬಂದ ಹಣ ನಾಪತ್ತೆಯಾಗಿದೆ ಎಂಬ ಆರೋಪದ ಬಗ್ಗೆ, ದೇವಾಲಯದ ಟ್ರಸ್ಟ್ನ ಕೋರಿಕೆಯ ಮೇರೆಗೆ ಜೂನ್ 13 ರಂದು ಉತ್ತರ ಪ್ರದೇಶ ಸರ್ಕಾರವು ರಚಿಸಿದ ಮೂವರು ಸದಸ್ಯರ ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ನಡೆಸುತ್ತಿದೆ.
Advertisement