

ಕೋಲ್ಕತ್ತಾ: TMC ಪಕ್ಷದ ನಿಧಿ ನಿಯಂತ್ರಣ ವಿಚಾರದಲ್ಲಿ ನಿಜವಾದ ತೃಣಮೂಲ ಕಾಂಗ್ರೆಸ್ ಹಾಗೂ ಬಂಡಾಯ ಗುಂಪಿನ ನಡುವಿನ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಪಕ್ಷಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆಯಲ್ಲಿನ ಹಣಕಾಸಿನ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಬಂಡಾಯ ಗುಂಪು ಅಧಿಕಾರಿಗಳನ್ನು ಸಂಪರ್ಕಿಸುವುದರೊಂದಿಗೆ ಇದು ಉಲ್ಬಣಗೊಂಡಿತು ಎನ್ನಲಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯ ವಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಸುಮಾರು 10 ಬಂಡಾಯ ಶಾಸಕರ ಬಣ ಬಿಧಾನ್ನಗರ ಪೊಲೀಸ್ ಆಯುಕ್ತಾಲಯಕ್ಕೆ ದೂರು ಸಲ್ಲಿಸಿ, ಅಕ್ರಮ ವಹಿವಾಟುಗಳು ಮತ್ತು ಪಕ್ಷದ ಬ್ಯಾಂಕ್ ಖಾತೆಯಲ್ಲಿ "ಹಣ ಕಡಿತ"ದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರಾಗಿರುವ ಮಾಜಿ ರಾಜ್ಯ ಸಚಿವ ಅರೂಪ್ ಬಿಸ್ವಾಸ್ ಅವರು ಪಕ್ಷದ ಖಾತೆಯನ್ನು ಸ್ಥಗಿತಗೊಳಿಸುವಂತೆ ದಕ್ಷಿಣ ಕೋಲ್ಕತ್ತಾದ ಖಾಸಗಿ ಬ್ಯಾಂಕ್ಗೆ ಪತ್ರ ಬರೆದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಪಕ್ಷದ ಖಜಾಂಚಿ ಎಂದು ಹೇಳಿಕೊಳ್ಳುವ ಬಿಸ್ವಾಸ್, ಪಕ್ಷದ ನಿಯಂತ್ರಣ ವಿವಾದ ಬಗೆಹರಿಯುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಮತ್ತು ಯಾವುದೇ ವಹಿವಾಟು ನಡೆಸದಂತೆ ಬ್ಯಾಂಕ್ ನ್ನು ಒತ್ತಾಯಿಸಿದ್ದಾರೆ. ಅನಧಿಕೃತ ವ್ಯಕ್ತಿಗಳು ಸಹಿ ಮಾಡಿದ ಚೆಕ್ಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದು, ಸಕ್ಷಮ ಪ್ರಾಧಿಕಾರ ಮಧ್ಯಪ್ರವೇಶಿಸುವವರೆಗೆ ವಹಿವಾಟುಗಳನ್ನು ಸ್ಥಗಿತಗೊಳಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಬಂಡಾಯ ಬಣ ದೂರು ನೀಡಿದ ನಂತರ ಪಕ್ಷದ ನಿಧಿ ನಿಯಂತ್ರಣದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಇದರ ಮೊತ್ತ ಸುಮಾರು 675 ಕೋಟಿ ರೂ.ಗಳಷ್ಟಿದೆ ಎಂದು ವರದಿಯಾಗಿದೆ.
ಇತ್ತೀಚಿನ ಚುನಾವಣಾ ಹಿನ್ನಡೆಗಳ ನಂತರ ತೃಣಮೂಲ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಆಂತರಿಕ ಜಗಳದ ನಡುವೆ ಪಕ್ಷದ ರಚನೆ ಮತ್ತು ಆರ್ಥಿಕ ಅಧಿಕಾರದ ಮೇಲೆ ಎರಡು ಬಣಗಳು ತಮ್ಮ ಹಕ್ಕು ಪ್ರತಿಪಾದಿಸುತ್ತಿವೆ. ಬಂಡಾಯ ಶಾಸಕರ ಗುಂಪು ಪಕ್ಷದ ಕಾನೂನುಬದ್ಧ ಪ್ರತಿನಿಧಿಗಳೆಂದು ಹೇಳಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಕ್ಷದ ಖಾತೆ ನಿರ್ವಹಿಸಲು ಯಾರು ಅಧಿಕಾರ ಹೊಂದಿದ್ದಾರೆ ಎಂಬುದರ ಕುರಿತು ಅನಿಶ್ಚಿತತೆ ಉಂಟಾಗಿದೆ. ಹೆಚ್ಚಿನ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳು ಪಕ್ಷವನ್ನು ತೊರೆದಿದ್ದಾರೆ ಅಥವಾ ಬಹಿರಂಗವಾಗಿ ದಂಗೆ ಎದ್ದಿದ್ದಾರೆ, ಇದು ನಾಯಕತ್ವದ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಬಿಸ್ವಾಸ್ ಅವರು ಬ್ಯಾಂಕಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಬಂಡಾಯ ಗುಂಪಿನ ಶಾಸಕರು ನಾಯಕತ್ವ ಮತ್ತು ಪಕ್ಷದ ಆಸ್ತಿಗಳ ಮೇಲೆ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಇರುವುದರಿಂದ, ಆಂತರಿಕ ಸಂಘರ್ಷ ಪಕ್ಷದೊಳಗೆ ಆರ್ಥಿಕ ನಿಯಂತ್ರಣ ಮತ್ತು ಆಡಳಿತಾತ್ಮಕ ಅಧಿಕಾರದ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಮೂಲಗಳು ತಿಳಿಸಿವೆ.
Advertisement