

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ 'ಆಪರೇಷನ್ ಟೈಗರ್' ಸೋಮವಾರ ಕೊನೆಗೂ ಸಕ್ಸಸ್ ಆಗಿದ್ದು, ಶಿವಸೇನೆಯ(ಯುಬಿಟಿ) ಆರು ಬಂಡಾಯ ಸಂಸದರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಯಾದರು. ಇದು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದೊಳಗಿನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ ಮತ್ತು ಅದರ ಸಂಸದೀಯ ಪಕ್ಷ ಅಧಿಕೃತವಾಗಿ ವಿಭಜನೆಯಾಗಿದೆ.
ನವದೆಹಲಿಯಲ್ಲಿ ನಡೆದ ಪ್ರಮುಖ ಶಿವಸೇನೆ(ಯುಬಿಟಿ) ಸಂಸದೀಯ ಪಕ್ಷದ ಸಭೆಗೆ ಗೈರು ಆದ ಐದು ದಿನಗಳ ನಂತರ ಇಂದು ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಸೇನಾ ಯುಬಿಟಿ ಸಂಸದರು ಶಿಂಧೆ ಸಮ್ಮುಖದಲ್ಲಿ ಅವರ ಪಕ್ಷವನ್ನು ಸೇರಿದರು. ಈ ಮೂಲಕ ಶಿವಸೇನೆ(ಯುಬಿಟಿ) ಪಕ್ಷದ ಒಂಬತ್ತು ಲೋಕಸಭಾ ಸಂಸದರಲ್ಲಿ ಆರು ಸಂಸದರು ಶಿಂಧೆ ಬಣ ಸೇರಿದ್ದು, ಈಗ ಕೇವಲ ಮೂವರು ಮಾತ್ರ ಉಳಿದಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, ಈ ಕ್ರಮವನ್ನು 2022 ರಲ್ಲಿ ಉದ್ಧವ್ ಠಾಕ್ರೆ ವಿರುದ್ಧದ ತಮ್ಮ ದಂಗೆಯ ಮುಂದುವರಿಕೆ ಎಂದು ಬಣ್ಣಿಸಿದರು. 2022ರಲ್ಲಿ ಶಿಂಧೆ ಶಿವಸೇನೆಯನ್ನು ವಿಭಜಿಸಿ ಅಂತಿಮವಾಗಿ ಮುಖ್ಯಮಂತ್ರಿಯಾಗಿದ್ದರು.
"ಈ ಲೋಕಸಭಾ ಸದಸ್ಯರು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ತತ್ವ, ಸಿದ್ಧಾಂತಗಳನ್ನು ಅನುಸರಿಸುವ ಮೂಲ ಶಿವಸೇನೆಗೆ ಸೇರಿದ್ದಾರೆ. ನಾಲ್ಕು ವರ್ಷಗಳ ಹಿಂದೆಯೇ ನಾನು ಬಲವಾದ ಹೆಜ್ಜೆ ಇಟ್ಟಿದ್ದೇನೆ ಮತ್ತು ಈಗ ನಾನು ಸಿಕ್ಸರ್ ಹೊಡೆದಿದ್ದೇನೆ(ನಿಷ್ಠೆಯನ್ನು ಬದಲಾಯಿಸಿದ ಸಂಸದರ ಸಂಖ್ಯೆಯನ್ನು ಉಲ್ಲೇಖಿಸುತ್ತದೆ)" ಎಂದು ಅವರು ಹೇಳಿದರು.
"ಆಪರೇಷನ್ ಟೈಗರ್" ಈಗ ಪೂರ್ಣಗೊಂಡಿದೆ ಮತ್ತು ಯಶಸ್ವಿಯಾಗಿದೆ ಎಂದು ಉಪಮುಖ್ಯಮಂತ್ರಿ ಘೋಷಿಸಿದರು.
ಪಕ್ಷಾಂತರಗೊಂಡ ಆರು ಸಂಸದರು ಯವತ್ಮಾಲ್ನ ಸಂಜಯ್ ದೇಶಮುಖ್, ಪರ್ಭಾನಿಯ ಸಂಜಯ್ ಜಾಧವ್, ಮುಂಬೈ ಈಶಾನ್ಯ ಸಂಸದ ಸಂಜಯ್ ದಿನಾ ಪಾಟೀಲ್, ಹಿಂಗೋಲಿಯ ನಾಗೇಶ್ ಪಾಟೀಲ್-ಅಶ್ತಿಕರ್, ಧಾರಾಶಿವ್ನ ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಶಿರಡಿಯ ಭೌಸಾಹೇಬ್ ವಾಕ್ಚೌರೆ.
ಈ ಆರು ಸಂಸದರೂ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿಂಧೆ ನೇತೃತ್ವದ ಶಿವಸೇನೆಯ ಅಭ್ಯರ್ಥಿಗಳನ್ನು ಸೋಲಿಸಿದ್ದರು.
2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಶಿವಸೇನೆ(ಯುಬಿಟಿ) ಮಹಾರಾಷ್ಟ್ರದಲ್ಲಿ ಒಂಬತ್ತು ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು.
Advertisement