

ನವದೆಹಲಿ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಒಂದು ವರ್ಷದ ಬಳಿಕ ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯನ್ನು ಶುಕ್ರವಾರ ಬಹಿರಂಗಪಡಿಸಿದೆ. ಕಾರ್ಯಾಚರಣೆ ವೇಳೆ ಹುತಾತ್ಮರಾದ ಆರು ಯೋಧರ ಹೆಸರುಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದ (NWM) ಹುತಾತ್ಮರ ಯೋಧರ ಪಟ್ಟಿಯಲ್ಲಿ ಇವರ ಹೆಸರನ್ನು ದಾಖಲಿಸಿದೆ.
ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ತ್ಯಾಗ ಚಕ್ರ (Circle of Sacrifice) ಮೇಲೂ ಈ ಹುತಾತ್ಮ ಯೋಧರ ಹೆಸರುಗಳನ್ನು ಕೆತ್ತಲಾಗಿದೆ. ಇದು ಸ್ವಾತಂತ್ರ್ಯಾನಂತರ ನಡೆದ ರಾಷ್ಟ ಸೇವೆಯಲ್ಲಿ ಹುತಾತ್ಮರಾದ ಯೋಧರ ಹೆಸರುಗಳು, ಶ್ರೇಣಿ ಮತ್ತು ಘಟಕಗಳನ್ನು ಹೊಂದಿರುವ 16 ಕೇಂದ್ರೀಕೃತ ಗ್ರಾನೈಟ್ ಗೋಡೆಗಳನ್ನು ಒಳಗೊಂಡಿದೆ.
ಹುತಾತ್ಮರಾದವರು
ಸೇನೆಯ ವಿವಿಧ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10 ನೇ ಪದಾತಿ ದಳದ ಸುಬೇದಾರ್ ಮೇಜರ್ ಪವನ್ ಕುಮಾರ್, 4 ನೇ ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳದ ರೈಫಲ್ಮ್ಯಾನ್ ಸುನಿಲ್ ಕುಮಾರ್, 5 ನೇ ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, 851 ನೇ ಲೈಟ್ ರೆಜಿಮೆಂಟ್ನ ವಾಯುಸೇನೆ ತಂತ್ರಜ್ಞ ಎಂ. ಮುರಳಿ ನಾಯಕ್, 237 ನೇ ಫೀಲ್ಡ್ ವರ್ಕ್ಶಾಪ್ ಕಂಪನಿಯ ಹವಿಲ್ದಾರ್ ಸುನಿಲ್ ಕುಮಾರ್ ಸಿಂಗ್ ಮತ್ತು ಭಾರತೀಯ ವಾಯುಪಡೆಯ ನಂ. 39 ವಿಂಗ್ನ ಸಾರ್ಜೆಂಟ್ ಸುರೇಂದ್ರ ಕುಮಾರ್ ಆಪರೇಷನ್ ಸಿಂಧೂರ ವೇಳೆ ಹುತಾತ್ಮರಾಗಿದ್ದಾರೆ ಎಂದು ತಿಳಿಸಲಾಗಿದೆ.
ಆರು ಮಂದಿಯಲ್ಲಿ ಇಬ್ಬರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದೆ. ರೈಫಲ್ಮ್ಯಾನ್ ಸುನಿಲ್ ಕುಮಾರ್ ಅವರಿಗೆ ಮರಣೋತ್ತರವಾಗಿ ವೀರ ಚಕ್ರ ಪ್ರಶಸ್ತಿ ಮತ್ತು ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರಿಗೆ ವಾಯು ಸೇನಾ ಪದಕವನ್ನು ನೀಡಲಾಗಿದೆ.
ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮೇ 7 ರ ಮುಂಜಾನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಆರಂಭಿಸಿದ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾಗೆ ಸಂಬಂಧಿಸಿದ ಒಂಬತ್ತು ಭಯೋತ್ಪಾದನಾ ಸಂಬಂಧಿತ ತಾಣಗಳ ಮೇಲೆ ದಾಳಿ ಮಾಡಿದವು.
ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO ಗಳು) ಕದನ ವಿರಾಮ ಜಾರಿಗೆ ಒಪ್ಪಿಕೊಂಡ ನಂತರ ಮೇ 10 ರಂದು ಉದ್ವಿಗ್ನ ಪರಿಸ್ಥಿತಿ ಅಂತ್ಯಗೊಂಡಿತ್ತು.