

ಪುಣೆ: VSR ವೆಂಚರ್ಸ್ ಮಾಲೀಕ ರೋಹಿತ್ ಸಿಂಗ್ ವಿಮಾನವೊಂದರ ಹಾರಾಟದ ವೇಳೆ ಮುಖ್ಯ ಪೈಲಟ್ ಸೀಟಿನಲ್ಲಿ ಮಲಗಿರುವ ವಿಡಿಯೋವೊಂದನ್ನು ಮಹಾರಾಷ್ಟ್ರದ ದಿವಂಗತ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಪುತ್ರ ಜಯ್ ಪವಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ತನ್ನ ತಂದೆಯ ವಿಮಾನ ಅಪಘಾತದ ವಿಚಾರಣೆ ಪೂರ್ಣಗೊಳ್ಳುವವರೆಗೆ ವಿಎಸ್ಆರ್ ವೆಂಚರ್ಸ್ನ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜನವರಿ 28 ರಂದು VSR ವೆಂಚರ್ಸ್ ನ ಲಿಯರ್ಜೆಟ್ 45 ವಿಮಾನದಲ್ಲಿ ತೆರಳುತ್ತಿದ್ದ ಅಜಿತ್ ಪವಾರ್ ಮತ್ತಿತರು ನಾಲ್ವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ಕ್ಲಿಪ್ ಅನ್ನು ಹಂಚಿಕೊಂಡಿರುವ ಜಯ್ ಪವಾರ್, ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆ. ಈ ನೋವು ನಮ್ಮೊಂದಿಗೆ ಶಾಶ್ವತವಾಗಿ ಇರುತ್ತದೆ. ಈ ವೀಡಿಯೊದಲ್ಲಿ ವಿಎಸ್ಆರ್ ಮಾಲೀಕ ರೋಹಿತ್ ಸಿಂಗ್ ವಿಮಾನ ಹಾರಾಟದ ವೇಳೆ ಮುಖ್ಯ ಪೈಲಟ್ ಸೀಟಿನಲ್ಲಿ ಮಲಗಿರುವುದು ಕಂಡುಬಂದಿದೆ. ವಿಮಾನ ಹಾರಾಟದ ಸಂದರ್ಭದಲ್ಲಿ ಇಂತಹ ನಿರ್ಲಕ್ಷ್ಯ ಸರಿಯಲ್ಲ. ಇದು ಅತ್ಯಂತ ಗಂಭೀರ ಮತ್ತು ಆಘಾತಕಾರಿ ಎಂದು ಅವರು ಹೇಳಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಕೂಡಲೇ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಂಪೂರ್ಣ ತನಿಖೆ ಮುಗಿಯುವವರೆಗೂ ಎಲ್ಲಾ VSR ವಿಮಾನಗಳ ಸೇವೆಯನ್ನು ತಕ್ಷಣದಿಂದ ಸ್ಥಗಿತಗೊಳಿಸಬೇಕು ಮತ್ತು ರೋಹಿತ್ ಸಿಂಗ್ ಅವರನ್ನು ವಿಳಂಬ ಮಾಡದೆ ಬಂಧಿಸಿ, ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಇದು ನನ್ನ ತಂದೆ ಮತ್ತು ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಗಾಗಿ ನೋವಿನ ಮನವಿಯಾಗಿದೆ ಎಂದು ಅವರು ಹೇಳಿದ್ದಾರೆ.
ಏರ್ಕ್ರಾಫ್ಟ್ ಆ್ಯಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB) ಶನಿವಾರ ವಿಮಾನ ಅಪಘಾತದ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಅಪಘಾತದ ಸಮಯದಲ್ಲಿ ಗೋಚರತೆ ಅಗತ್ಯ ಮಟ್ಟಕ್ಕಿಂತ ಕಡಿಮೆಯಾಗಿತ್ತು ಎಂದು ಹೇಳಿದೆ.
Advertisement