

ಕಾಂಗ್ರೆಸ್ ಪಕ್ಷವು ಮುಂಬರುವ ರಾಜ್ಯಸಭೆ ಚುನಾವಣೆಗೆ ತನ್ನ ಇಬ್ಬರು ಹಾಲಿ ಸಂಸದರನ್ನು ಮರುನಾಮನಿರ್ದೇಶನ ಮಾಡಿದೆ. ಅಭಿಷೇಕ್ ಮನು ಸಿಂಘ್ವಿ ಅವರನ್ನು ತೆಲಂಗಾಣದಿಂದ ಮತ್ತು ಫುಲೊ ದೇವಿ ನೇತಂ ಅವರನ್ನು ಛತ್ತೀಸ್ಗಢದಿಂದ ಮತ್ತೆ ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.
ಇದರ ಜೊತೆಗೆ ಹರಿಯಾಣದಿಂದ ಕರಂವೀರ್ ಸಿಂಗ್ ಬೌಧ್ ಹಾಗೂ ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮ ಅವರನ್ನು ಮಾರ್ಚ್ 16ರಂದು ನಡೆಯುವ ದ್ವೈವಾರ್ಷಿಕ ರಾಜ್ಯಸಭೆ ಚುನಾವಣೆಗೆ ಪಕ್ಷ ನಾಮನಿರ್ದೇಶನ ಮಾಡಿದೆ. ಅನುರಾಗ್ ಶರ್ಮಾ ಅವರು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ ವೀಂದರ್ ಸಿಂಗ್ ಸುಖ್ ಅವರಿಗೆ ಸಮೀಪವರ್ತಿಯಾಗಿದ್ದು, ಪ್ರಸ್ತುತ ಕಾಂಗ್ರೆಸ್ಸಿನ ಕಾಂಗ್ರಾ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಡಿಎಂಕೆ ಪಕ್ಷವು ಕಾಂಗ್ರೆಸ್ಗೆ ಒಂದು ರಾಜ್ಯಸಭೆ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ಎಂ ಕ್ರಿಸ್ಟೋಫರ್ ಟಿಲಕ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದೆ.
ತೆಲಂಗಾಣದ ಎರಡನೇ ಸ್ಥಾನಕ್ಕೆ ವೇಮ್ ನರೇಂದರ್ ರೆಡ್ಡಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆಪ್ತ ಸಹಚರರಾಗಿದ್ದಾರೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಅಭ್ಯರ್ಥಿತ್ವಗಳನ್ನು ಅನುಮೋದಿಸಿದ್ದಾರೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇಂದೇ ಕೊನೆಯ ದಿನವಾಗಿದೆ. ತೆಲಂಗಾಣದಿಂದ ಎರಡು ರಾಜ್ಯಸಭೆ ಸ್ಥಾನಗಳು ಏಪ್ರಿಲ್ 9ರಂದು ಖಾಲಿಯಾಗಲಿದ್ದು, ಅವುಗಳಲ್ಲಿ ಒಂದು ಅಭಿಷೇಕ್ ಮನು ಸಿಂಘ್ವಿ ಅವರದು ಹಾಗೂ ಮತ್ತೊಂದು ಕೆ ಆರ್ ಸುರೇಶ್ ರೆಡ್ಡಿ ಅವರದು.
ಮಾರ್ಚ್ 16ರಂದು ಚುನಾವಣೆ
ಇದೇ ವೇಳೆ ಭಾರತದ ಚುನಾವಣಾ ಆಯೋಗ ಮಾರ್ಚ್ 16ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದೆ. ಈ ಚುನಾವಣೆ ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಸೇರಿ 10 ರಾಜ್ಯಗಳ 37 ಸ್ಥಾನಗಳಿಗೆ ನಡೆಯಲಿದೆ.
ಇದಕ್ಕೂ ಮಧ್ಯೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಆರು ರಾಜ್ಯಗಳ ಒಂಬತ್ತು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಛತ್ತೀಸ್ಗಢದಿಂದ ಲಕ್ಷ್ಮಿ ವರ್ಮ ಅವರನ್ನು ನಾಮನಿರ್ದೇಶನ ಮಾಡಿದೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷವು ಬಬೂಲ್ ಸುಪ್ರಿಯೊ, ರಾಜೀವ್ ಕುಮಾರ್, ಮೇನಕಾ ಗುರುಸ್ವಾಮಿ ಮತ್ತು ಕೊಯೆಲ್ ಮಲ್ಲಿಕ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದೆ.
ಅದೇ ವೇಳೆ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಪಕ್ಷವು ಒಡಿಶಾದಿಂದ ಸಂತೃಪ್ತ್ ಮಿಶ್ರಾ ಮತ್ತು ದತ್ತೇಶ್ವರ ಹೋಟಾ ಅವರನ್ನು ನಾಮನಿರ್ದೇಶನ ಮಾಡಿದೆ.
Advertisement