

ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿರುವ
ಕಾಂಗ್ರೆಸ್, ಈ ಸಂಬಂಧ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ.
ಸ್ಪೀಕರ್ ಓಂ ಬಿರ್ಲಾರ ಅವರ ಪದಚ್ಯುತಿ ಕೋರಿ ಸಲ್ಲಿಸಲಾಗಿರುವ ನೋಟಿಸ್ ಮುಂದಿನ ವಾರ ಲೋಕಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಮಾರ್ಚ್ 9 ರಿಂದ 11 ರವರೆಗೆ ಕಡ್ಡಾಯವಾಗಿ ಲೋಕಸಭೆಯಲ್ಲಿ ಹಾಜರಿರಬೇಕು ಎಂದು ಸೂಚಿಸಿದೆ.
ಮಾರ್ಚ್ 9 ರಂದು ಬಜೆಟ್ ಅಧಿವೇಶನದ ಎರಡನೇ ಹಂತ ಆರಂಭವಾಗಲಿದೆ.
ಬಜೆಟ್ ಅಧಿವೇಶನದ ದ್ವಿತೀಯಾರ್ಧದ ಮೊದಲ ಮೂರು ದಿನಗಳವರೆಗೆ ತನ್ನ ಸಂಸದರು ಕೆಳಮನೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಕಾಂಗ್ರೆಸ್ ಮೂರು ಸಾಲಿನ ವಿಪ್ ಅನ್ನು ಜಾರಿಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಸದನವು ಸರಳ ಬಹುಮತದಿಂದ ನಿರ್ಣಯವನ್ನು ಅಂಗೀಕರಿಸಿದರೆ ಸ್ಪೀಕರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬಹುದು.
ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಮತ್ತು ಮತದಾನ ನಡೆಯುವಾಗ ಓಂ ಬಿರ್ಲಾ ಅವರು ಸಭೆಯ ಅಧ್ಯಕ್ಷತೆ ವಹಿಸುವುದಿಲ್ಲ. ಬದಲಾಗಿ ಸದಸ್ಯರ ನಡುವೆ ಕುಳಿತುಕೊಳ್ಳಲಿದ್ದಾರೆ.
ಈ ನಿರ್ಣಯದ ಚರ್ಚೆಯ ವೇಳೆ ಬಿರ್ಲಾ ಅವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಅಷ್ಟೆ ಅಲ್ಲದೇ ನಿರ್ಣಯದ ವಿರುದ್ಧ ಮತ ಚಲಾಯಿಸುವ ಹಕ್ಕನ್ನು ಸಹ ಹೊಂದಿರುತ್ತಾರೆ.
ಪ್ರಸ್ತಾವಿತ ಈ ನಿರ್ಣಯದ ಕುರಿತು ಸಾಮಾನ್ಯವಾಗಿ ಉಪ ಸ್ಪೀಕರ್ ಪರಿಶೀಲಿಸುತ್ತಾರೆ. ಆದರೆ ಪ್ರಸ್ತುತ ಲೋಕಸಭೆಯಲ್ಲಿ ಉಪ ಸ್ಪೀಕರ್ ಇಲ್ಲದಿರುವುದರಿಂದ, ಅಧ್ಯಕ್ಷರ ಸಮಿತಿಯ ಅತ್ಯಂತ ಹಿರಿಯ ಸದಸ್ಯರು ಅದನ್ನು ಪರಿಶೀಲಿಸಬಹುದು. ಸ್ಪೀಕರ್ ಅನುಪಸ್ಥಿತಿಯಲ್ಲಿ ಸದನವನ್ನು ನಡೆಸಲು ಈ ಸಮಿತಿ ಸಹಾಯ ಮಾಡುತ್ತದೆ.
ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಪ್ರಧಾನಿ ಮೋದಿಯವರ ಉತ್ತರವಿಲ್ಲದೆಯೇ ವಂದನಾ ನಿರ್ಣಯವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ವೇಳೆ ಮಾತನಾಡಿದ್ದ ಸ್ಪೀಕರ್ ಓಂ ಬಿರ್ಲಾ, “ಕಾಂಗ್ರೆಸ್ ಸದಸ್ಯರು ಪ್ರಧಾನಿಯವರ ಆಸನದ ಬಳಿ ತೆರಳಿ ಅನಿರೀಕ್ಷಿತ ಕೃತ್ಯ ಎಸಗುವ ಬಗ್ಗೆ ಖಚಿತ ಮಾಹಿತಿ ಇತ್ತು. ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ಧಕ್ಕೆ ಬಾರದಿರಲಿ ಎಂದು ನಾನೇ ಪ್ರಧಾನಿಯವರನ್ನು ಸದನಕ್ಕೆ ಬರದಂತೆ ಕೋರಿದ್ದೆ” ಎಂಬ ಹೇಳಿಕೆ ನೀಡಿದ್ದರು.
ಆದರೆ, ಈ ಆರೋಪವನ್ನು ತಳ್ಳಿಹಾಕಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, “ಇದು ಹಸಿ ಸುಳ್ಳು. ಪ್ರಧಾನಿ ಮೋದಿ ಸ್ಪೀಕರ್ ಅವರ ಹಿಂದೆ ಅವಿತುಕೊಳ್ಳುತ್ತಿದ್ದಾರೆ,” ಎಂದು ತಿರುಗೇಟು ನೀಡಿದ್ದರು.
Advertisement