

ಮುಂಬೈ: ಇರಾನ್ ವಿರುದ್ಧ ಇಸ್ರೇಲ್- ಅಮೆರಿಕ ಜಂಟಿ ದಾಳಿ ಮುಂದುವರೆದಿದ್ದು, ಇರಾನ್, ಜಗತ್ತಿನ ಪ್ರಮುಖ ಕಚ್ಚಾ ತೈಲ ಸರಕು ಸಾಗಣೆ ಮಾರ್ಗ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ಭಾರತದಲ್ಲಿ ತೈಲ, ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗತೊಡಗಿದೆ.
ಹಲವೆಡೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದನ್ನೇ ಈಗ ಸೈಬರ್ ವಂಚಕರು ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸತೊಡಗಿದ್ದಾರೆ. ಯುಎನ್ಐ ಮಾಧ್ಯಮ ಸಂಸ್ಥೆ ಪ್ರಕಟಿಸಿರುವ ವರದಿಯ ಪ್ರಕಾರ, ವಂಚಕರು ಗ್ಯಾಸ್ ವಿತರಣೆ ಸಂಸ್ಥೆಗಳ ಅಧಿಕಾರಿಗಳ ಸೋಗಿನಲ್ಲಿ ಗ್ರಾಹಕರನ್ನು ವಂಚಿಸತೊಡಗಿದ್ದಾರೆ.
ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವ ವಂಚಕರು, ಗ್ರಾಹಕರಿಗೆ, "ನಿಮ್ಮ ಗ್ಯಾಸ್ ಬಿಲ್ ಬಾಕಿ ಇದೆ, ಪಾವತಿ ಮಾಡದೇ ಇದ್ದರೆ ತಕ್ಷಣವೇ ಕನೆಕ್ಷನ್ ನ್ನು ಕಡಿತಗೊಳಿಸಲಾಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ಗ್ಯಾಸ್ ಸಂಪರ್ಕವನ್ನು ಮುಂದುವರೆಸುವುದಕ್ಕಾಗಿ ಮೊದಲು 10-20 ರೂಪಾಯಿಗಳ ಸಣ್ಣ ಮೊತ್ತವನ್ನು ಪಾವತಿಸುವಂತೆ ಕೇಳಲಾಗುತ್ತದೆ. ಈ ಬಳಿಕ ಮಹಾನಗರ್ ಎಪಿಕೆ ಎಂಬ ಫೈಲ್ ನ್ನು ಡೌನ್ ಲೋಡ್ ಮಾಡಲು ಸೂಚಿಸಲಾಗುತ್ತದೆ. ಈ ಫೈಲ್ ಡೌನ್ ಲೋಡ್ ಮಾಡಿದ ಕೂಡಲೇ ಸೈಬರ್ ಕ್ರಿಮಿನಲ್ ಗಳಿಗೆ ಗ್ರಾಹಕರ ಮೊಬೈಲ್ ಮೇಲೆ ಸಂಪೂರ್ಣ ನಿಯಂತ್ರಣ ಸಿಗುತ್ತದೆ ಈ ಬಳಿಕ ಗ್ರಾಹಕರ ಬ್ಯಾಂಕ್ ನಿಂದ ನೇರವಾಗಿ ಹಣ ಎಗರಿಸುತ್ತಾರೆ.
ಮುಂಬೈ ನಲ್ಲಿ ಕಳೆದ 4 ದಿನಗಳಲ್ಲಿ ಇಂತಹ 4 ಪ್ರಕರಣಗಳು ವರದಿಯಾಗಿದ್ದು, ಗ್ರಾಹಕರು ಒಟ್ಟಾರೆ 26.43 ಲಕ್ಷ ರೂಪಾಯಿಗಳನ್ನು ಇಂತಹ ಘಟನೆಗಳಿಂದ ಕಳೆದುಕೊಂಡಿದ್ದಾರೆ. ಗ್ರಾಹಕರು ಗ್ಯಾಸ್ ಪೂರೈಕೆ ವ್ಯತ್ಯಯದ ಬಗ್ಗೆ ಈಗಾಗಲೇ ಆತಂಕಗೊಂಡಿದ್ದು, ಈ ಆತಂಕವನ್ನೇ ಸೈಬರ್ ಅಪರಾಧಿಗಳು ತಮ್ಮ ಲಾಭಕ್ಕೆ ಬಂಡವಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮುನ್ನೆಚ್ಚರಿಕಾ ಕ್ರಮವಾಗಿ ಗ್ಯಾಸ್ ವಿತರಣೆ ಕಂಪನಿಗಳು ಗ್ರಾಹಕರಿಗೆ ಜಾಗೃತರಾಗಿರುವಂತೆ ಸೂಚಿಸಿದ್ದು, ಕಂಪನಿ ಗ್ರಾಹಕರಿಗೆ ಯಾವುದೇ ಆಪ್ ಡೌನ್ ಲೋಡ್ ಮಾಡುವಂತೆ ಕೇಳುವುದಿಲ್ಲ. ಅಧಿಕೃತ ಗ್ರಾಹಕ ಸೇವೆ ನಂಬರ್ ಗಳ ಮೂಲಕ ಮಾಹಿತಿ ಪಡೆದುಕೊಳ್ಳುವಂತೆ ಹಾಗೂ ಅನುಮಾನಾಸ್ಪದ ಕರೆಗಳನ್ನು ಸ್ವೀಕರಿಸದಂತೆ ಮನವಿ ಮಾಡಿದೆ.
Advertisement