

ಲಕ್ನೋ: ಜವಾಹರಲಾಲ್ ನೆಹರೂ ಬದುಕಿದ್ದರೆ, ಕಾನ್ಶಿರಾಮ್ ಅವರನ್ನು ಕಾಂಗ್ರೆಸ್ನಿಂದಲೇ ಮುಖ್ಯಮಂತ್ರಿ ಮಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾನ್ಶಿರಾಮ್ ಅವರ ಜನ್ಮದಿನಕ್ಕೂ ಮುನ್ನಾ ಲಕ್ನೋದಲ್ಲಿ ಶುಕ್ರವಾರ ನಡೆದ ಸಂವಿಧಾನ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಮೊದಲ ಪ್ರಧಾನಿಯಾಗಿದ್ದ ನೆಹರೂ ಅವರು 1964ರಲ್ಲಿ ಮೃತಪಟ್ಟಿದ್ದರು. ಕಾನ್ಶಿರಾಮ್ ಅವರು 1978 ರಲ್ಲಿ ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ನೌಕರರ ಒಕ್ಕೂಟ (ಬಿಎಎಂಸಿಇಎಫ್) ಸ್ಥಾಪಿಸಿದ್ದರು. 1984ರಲ್ಲಿ ಬಹುಜನ್ ಸಮಾಜ ಪಕ್ಷವನ್ನು ಹುಟ್ಟುಹಾಕಿದ್ದರು.
ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕಾನ್ಶಿರಾಮ್ ಅವರು ಎಂದಿಗೂ ತತ್ವಗಳಲ್ಲಿ ರಾಜಿ ಮಾಡಿಕೊಳ್ಳಲಿಲ್ಲ ಎಂದರು. ನಾವು ಸಾಗಬೇಕಿದ್ದ ಹಾದಿಯಲ್ಲಿ ವೇಗವಾಗಿ ಸಾಗಬೇಕಿತ್ತು, ಆದರೆ ಕಾಂಗ್ರೆಸ್ನಿಂದಲೂ ಕೆಲವು ನ್ಯೂನತೆಗಳಾಗಿವೆ.
ಕಾಂಗ್ರೆಸ್ ಆ ಕೆಲಸ ಮಾಡಿದ್ದರೆ, ಕಾನ್ಶಿರಾಮ್ ಯಶಸ್ವಿಯಾಗುತ್ತಿರಲಿಲ್ಲ. ಒಂದೊಮ್ಮೆ ನೆಹರೂ ಅವರು ಬದುಕಿದ್ದರೆ, ಅವರು (ಕಾನ್ಶಿರಾಮ್) ಕಾಂಗ್ರೆಸ್ನಿಂದಲೇ ಮುಖ್ಯಮಂತ್ರಿಯಾಗುತ್ತಿದ್ದರು’ ಎಂದು ರಾಹುಲ್ ತಿಳಿಸಿದ್ದಾರೆ.
ದೇಶದ ಇಂಧನ ಭದ್ರತೆಯೊಂದಿಗೆ ಮೋದಿ ರಾಜಿ ಮಾಡಿಕೊಂಡಿದ್ದಾರೆ. ನಾವು ಯಾರಿಂದ ತೈಲ ಖರೀದಿಸಬೇಕೆಂದು ಅಮೆರಿಕ ನಿರ್ಧರಿಸುತ್ತಿದೆ. ಇದರಿಂದ ಇಂಧನ ಕ್ಷೇತ್ರದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸಿದ್ದೆ. ಆದರೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ಬಗ್ಗೆ ಜನರು ಅನೇಕ ವಿಷಯಗಳನ್ನು ಹೇಳುತ್ತಾರೆ, ಅವರು ಕೊಲಂಬಿಯಾದಲ್ಲಿ ಅಧ್ಯಯನ ಮಾಡಿದರು, ಅವರು ದಲಿತರಿಗಾಗಿ ಹೋರಾಡಿದರು, ಅವರು ಒಬ್ಬ ಬುದ್ಧಿಜೀವಿ, ಅವರು ದಲಿತ ಉದ್ದೇಶವನ್ನು ಪ್ರತಿಪಾದಿಸಿದರು ಮತ್ತು ಅವರು ತಮ್ಮ ಇಡೀ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟರು. ಆದರೆ ಅಗತ್ಯ ಅಂಶವೇನು? ಅಗತ್ಯ ಅಂಶವೆಂದರೆ ಅವರು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ" ಎಂದು ರಾಹುಲ್ ಹೇಳಿದರು.
Advertisement